ಹುಣಸಗಿ: ಸಮೀಪದ ಅಗತೀರ್ಥ ಗ್ರಾಮ ಬಳಿ ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆ 60ನೇ ಕಿಮೀ ಬಳಿ ಬಿರುಕು ಕಾಣಿಸಿಕೊಂಡಿದೆ.
ಅಗ್ನಿ ಮತ್ತು ಅಗತೀರ್ಥ ಗ್ರಾಮದ ಬಳಿ ಈ ಕಾಲುವೆ ಗುಡ್ಡ ಸುತ್ತುವರಿದುಕೊಂಡು ಹೋಗಿದ್ದರಿಂದ ಈ ಭಾಗದಲ್ಲಿ ಆಗಾಗ ಕಾಲುವೆ ಕುಸಿತವಾಗುತ್ತಿದೆ. ಎಡದಂಡೆ ಮುಖ್ಯ ಕಾಲುವೆ ಸೇವಾ ರಸ್ತೆಯಲ್ಲಿ ಸುಮಾರು 50 ಮೀಟರ್ನಷ್ಟುಉದ್ದ ಬಿರುಕು ಕಾಣಿಸಿಕೊಂಡಿದೆ.
ಕಳೆದ ಬಾರಿ ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆ ಸುಮಾರು 200 ಕೋಟಿ ರೂ ವೆಚ್ಚದಲ್ಲಿ 25 ಕಿಮೀ ನವೀಕರಣ ಮಾಡಲಾಗಿದ್ದರೂ ಈ ಭಾಗದಲ್ಲಿ ಮಾತ್ರ ಕಾಲುವೆ ಅದೇ ಸ್ಥಿತಿಯಲ್ಲಿದೆ.
ಕಾಲುವೆ ಕುಸಿತ ವಿಷಯ ತಿಳಿದು ಸ್ಥಳಕ್ಕೆ ಸುಪರ್ಇಂಡೆಂಟ್ಎಂಜಿನಿಯರ್ ಭೋಜಾನಾಯಕ, ಕಾರ್ಯ ನಿರ್ವಾಹಕ ಎಂಜಿನಿಯರ್ ಎ.ಲೊಕೇಶಪ್ಪ, ಎಇಇ ಎಚ್.ರಹಮಾನ, ರವಿಕುಮಾರ ಸೇರಿದಂತೆ ಇತರರು ಭೇಟಿ ನೀಡಿ ಪರಿಶೀಲಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಎಡದಂಡೆ ಮಖ್ಯ ಕಾಲುವೆ ಬಿರುಕು ಕಾಣಿಸಿಕೊಂಡಿದ್ದರೂ ಕಾಲುವೆಗೆ ನೀರು ಹರಿಸಲು ಯಾವುದೇ ತೊಂದರೆಯಾಗುವುದಿಲ್ಲ. ಅಗತ್ಯ ಬಿದ್ದರೇ ತಾತ್ಕಾಲಿಕ ದುರಸ್ತಿಗಾಗಿ ಕ್ರಮ ಕೈಗೊಳ್ಳಲಾಗುವುದು ರೈತರು ಆತಂಕಪಡಬೇಕಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಕುರಿತು ಎಂಡಿಯವರಲ್ಲಿ ಮಾತನಾಡಿದ್ದು ದುರಸ್ತಿಗಾಗಿ ಅಂದಾಜು ಪತ್ರಿಕೆ ಸಲ್ಲಿಸಲಾಗುವುದು. ನೀರಾವರಿ ಸಲಹಾ ಸಮೀತಿ ಸಭೆಯ ನಿರ್ಣಯದಂತೆ ಅದೇ ದಿನಾಂಕ ದಂದು ಕಾಲುವೆಗೆ ನೀರು ಹರಿಸಲಾಗುತ್ತದೆ ಎಂದು ತಿಳಿಸಿದರು.