ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕು ವರ್ಷದಲ್ಲಿ ₨26.71 ಲಕ್ಷ ವ್ಯಯ!

ಬೀದಿ ನಾಯಿಗಳಿಗೆ ಸಂತಾನಶಕ್ತಿ ಹರಣ : ಪಾಲಿಕೆ ಮಾಹಿತಿ
Last Updated 3 ಜನವರಿ 2014, 8:09 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಿತ್ಯ ಕತ್ತಲಾಗುತ್ತಿದ್ದಂತೆಯೇ ವಾಹನ ಸವಾರರು ಹಾಗೂ ಪಾದಚಾರಿಗಳ ಕಾಲಿಗೆ ಅಡ್ಡವಾಗುವ ಬೀದಿ ನಾಯಿಗಳ ಸಂತಾನಶಕ್ತಿ ಹರಣ ಚಿಕಿತ್ಸೆಗೆ ಮಹಾನಗರ ಪಾಲಿಕೆಯ ಆರೋಗ್ಯ ವಿಭಾಗ ಕಳೆದ ವರ್ಷ ₨12,85,895 ಖರ್ಚು ಮಾಡಿದೆ. ಹಿಂದಿನ ನಾಲ್ಕು ವರ್ಷಗಳಲ್ಲಿ ಈ ಮೊತ್ತ ₨26,71,730. ಇದರೊಂದಿಗೆ ಹುಚ್ಚು ನಾಯಿಗಳ ದಯಾಮರಣಕ್ಕೆ ಹೆಚ್ಚುವರಿಯಾಗಿ ₨2,91,700 ವ್ಯಯಿಸಲಾಗಿದೆ.

ಇಲ್ಲಿನ ಉಣಕಲ್‌ನ ನಿವಾಸಿ ವಕೀಲ ಮೋಹನ ಮಾಳಿಗೇರ ಅವರು ನಾಯಿಗಳ ಹಾವಳಿ ನಿಯಂತ್ರಣಕ್ಕೆ 2008ರಿಂದ 13ರವರೆಗಿನ ಅವಧಿಯಲ್ಲಿ ಮಾಡಲಾದ ಖರ್ಚಿನ ಕುರಿತು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಪ್ರಶ್ನೆಗೆ ಮಹಾನಗರ ಪಾಲಿಕೆ ಆರೋಗ್ಯ ವಿಭಾಗ ಮೇಲಿನ ಮಾಹಿತಿ ಒದಗಿಸಿದೆ.
ಅದರಲ್ಲಿ 2010ರಲ್ಲಿ ಬೀದಿ ನಾಯಿಗಳ ಸಂತಾನಹರಣ ಚಿಕಿತ್ಸೆ ನಡೆಸಿಲ್ಲ. ಇದೆ ಅವಧಿಯಲ್ಲಿ ₨75,001 ಹಾಗೂ ಹಂದಿ ಕಡಿದವರಿಗೆ ಪರಿಹಾರವಾಗಿ ₨40 ಸಾವಿರ ಪಾಲಿಕೆಯಿಂದ ಕೊಡಲಾಗಿದೆ.

ಪಾಂಜರ ಪೋಳಕ್ಕೆ ಸಾಗಣೆಗೆ ₨4.9 ಲಕ್ಷ ವ್ಯಯ..: ಸಾರ್ವಜನಿಕರಿಂದ ಬಂದ ದೂರುಗಳ ಹಿನ್ನೆಲೆ ಈ ನಾಲ್ಕು ವರ್ಷಗಳಲ್ಲಿ ವಿವಿಧೆಡೆ ಬಿಡಾಡಿ ದನಗಳನ್ನು ಹಿಡಿದು ಕಾರವಾರ ರಸ್ತೆಯ ಪಾಂಜರಪೋಳ ಸಂಸ್ಥೆಗೆ ಸಾಗಿಸಲು ₨4,90,900 ಖರ್ಚು ಮಾಡಲಾಗಿದೆ. ಹೀಗೆ ಬಿಟ್ಟು ಬಂದ ದನಗಳಿಗೆ ಮೇವು ಒದಗಿಸಲು ₨50,000 ನೀಡಲಾಗಿದೆ.

ನಾಯಿಗಳ ಸಂಖ್ಯೆಯ ನಿಯಂತ್ರಣಕ್ಕೆ ಪಾಲಿಕೆ ಲಕ್ಷಾಂತರ ರೂಪಾಯಿ ವ್ಯಯಿಸಿದರೂ ಅವುಗಳ ಹಾವಳಿಯೇಕೆ ತಪ್ಪುತ್ತಿಲ್ಲ ಎಂದು ಪ್ರಶ್ನಿಸುತ್ತಾರೆ ವಕೀಲ ಮೋಹನ ಮಾಳಿಗೇರ. ಸಂತಾನಶಕ್ತಿಹ­ರಣಗೊಂಡ ನಾಯಿಗಳ ಸಂಖ್ಯೆಯ ವಿಚಾರದಲ್ಲಿ ಸುಳ್ಳು ದಾಖಲೆ ಸೃಷ್ಟಿಸಲಾಗಿದೆ ಆ ಬಗ್ಗೆ ಗಂಭೀರ ತನಿಖೆ ನಡೆಸುವಂತೆ ಪಾಲಿಕೆ ಆಯುಕ್ತರನ್ನು ಒತ್ತಾಯಿಸುತ್ತಾರೆ.

ಅವಳಿ ನಗರದಲ್ಲಿ 10 ಸಾವಿರ ನಾಯಿ: ಪಾಲಿಕೆಯ ವ್ಯಾಪ್ತಿಯಲ್ಲಿ ಇರುವ 10 ಸಾವಿರದಷ್ಟು ನಾಯಿಗಳಲ್ಲಿ ಈಗಾಗಲೇ 4 ಸಾವಿರಕ್ಕೂ ಅಧಿಕ ನಾಯಿಗಳಿಗೆ ಸಂತಾನಶಕ್ತಿಹರಣ ಚಿಕಿತ್ಸೆ ಮಾಡಲಾಗಿದೆ. ಈ ಚಿಕಿತ್ಸೆ ವೇಳೆ ನಾಯಿಯೊಂದಕ್ಕೆ ₨485 ಖರ್ಚು ಮಾಡಿದ್ದೇವೆ ಎನ್ನುತ್ತಾರೆ ಪಾಲಿಕೆ ಆರೋಗ್ಯಾಧಿಕಾರಿ ಡಾ.ಪ್ರಭು ಬಿರಾದಾರ.

ಪಾಲಿಕೆ ಆರೋಗ್ಯ ವಿಭಾಗದ ಈ ಪ್ರಯತ್ನದಿಂದ ಅವಳಿ ನಗರದಲ್ಲಿ ನಾಯಿಗಳ ದಾಳಿ ಕಡಿಮೆಯಾಗಿದೆ ಎನ್ನುವ ಅವರು, ನಾಯಿಯೊಂದು ಕನಿಷ್ಠ 6ರಿಂದ 10 ಮರಿಗಳನ್ನು ಹಾಕುತ್ತದೆ ಇದರಿಂದ ಕೇವಲ ಆರು ತಿಂಗಳಲ್ಲಿಯೇ ಅವುಗಳ ಸಂಖ್ಯೆ ದ್ವಿಗುಣಗೊಳ್ಳುತ್ತದೆ. ಸಂಖ್ಯೆ ಕಡಿಮೆ ಮಾಡಬೇಕಾದರೆ ಎಲ್ಲಾ ನಾಯಿಗಳಿಗೂ ಒಟ್ಟಿಗೆ ಸಂತಾನಶಕ್ತಿಹರಣ ಮಾಡಬೇಕಿದೆ ಎನ್ನುತ್ತಾರೆ.

‘ಮೂಗಿಗಿಂತ ಮೂಗುತಿಯೇ ಭಾರ ಎಂಬಂತೆ ಪಾಂಜರಪೋಳಕ್ಕೆ ದನಗಳನ್ನು ಸಾಗಿಸಲು ₨5 ಲಕ್ಷ ಖರ್ಚು ಮಾಡಿ ಮೇವಿಗೆ ಎಂದು ₨50 ಸಾವಿರ ಖರ್ಚು ಮಾಡಿದ್ದಾರೆ. ದನಗಳನ್ನು ಪಾಂಜರ­ಪೋಳಕ್ಕೆ ವಿಮಾನದಲ್ಲಿ ಸಾಗಿಸಲಾಗಿದೆಯೇ?’..                                                           
–ಮೋಹನ ಮಾಳಿಗೇರ. ವಕೀಲ.

‘ನಾಯಿಗಳ ಸಂತಾನಶಕ್ತಿಹರಣಕ್ಕೆ ಬೆಂಗಳೂರಿನಲ್ಲಿ ಪ್ರತಿ ವರ್ಷ ಕೋಟ್ಯಂತರ ಹಣ ಖರ್ಚು ಮಾಡಲಾಗುತ್ತಿದೆ. ಅದಕ್ಕೆ ಹೋಲಿಸಿದರೆ ನಮ್ಮಲ್ಲಿ ಅಷ್ಟೊಂದು ವ್ಯಯಿಸಿಲ್ಲ. ಅವಳಿ ನಗರದಲ್ಲಿ ನಾಯಿಗಳ ಸಂಖ್ಯೆ ಕಡಿಮೆಯಾಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಅಲ್ಲಿಯವರೆಗೂ ಕಾಯಬೇಕಿದೆ’...
–ಡಾ.ಪ್ರಭು ಬಿರಾದಾರ. ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ.

ವೆಟ್‌ ಸೊಸೈಟಿಗೆ ಜವಾಬ್ದಾರಿ...
ಹೈದರಾಬಾದ್ ಮೂಲದ ವೆಟ್‌ ಸೊಸೈಟಿ ಎಂಬ ಸರ್ಕಾರೇತರ ಸಂಸ್ಥೆಗೆ (ಎನ್‌ಜಿಒ) ಅವಳಿ ನಗರದ ವ್ಯಾಪ್ತಿಯ ನಾಯಿಗಳಿಗೆ ಸಂತಾನಶಕ್ತಿ ಹರಣ ಮಾಡುವ ಜವಾಬ್ದಾರಿ  ನೀಡಲಾಗಿದೆ. ನಾಯಿಯೊಂದಕ್ಕೆ ಸಂತಾನಶಕ್ತಿಹರಣ ಮಾಡಲು ಸರ್ಕಾರ ₨450 ನಿಗದಿ ಮಾಡಿದ್ದು, ಈ ಹಣಕ್ಕೆ ಕೆಲಸ ಎನ್‌ಜಿಒ ಒಪ್ಪದ ಕಾರಣ ₨485 ನೀಡಲಾಗಿದೆ. ಹುಚ್ಚು ಹಿಡಿದ ನಾಯಿಗೆ ದಯಾ ಮರಣ ಕೊಡಿಸಲು ನಾಯಿಯೊಂದಕ್ಕೆ ₨80 ಖರ್ಚು ಮಾಡಲಾಗಿದೆ ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT