ಚೆನ್ನೈ(ಪಿಟಿಐ): ಕಾವೇರಿ ವಿವಾದದ ಹಿನ್ನೆಲೆಯಲ್ಲಿ ವಸ್ತುಸ್ಥಿತಿ ಅಧ್ಯಯನಕ್ಕೆಂದು ಗುರುವಾರ ಇಲ್ಲಿಗೆ ಆಗಮಿಸಿದ್ದ ಕೇಂದ್ರ ತಂಡವು ತಮಿಳುನಾಡು ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದು, ನಾಲ್ಕು ದಿನಗಳೊಳಗಾಗಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ ಎಂದು ತಿಳಿಸಿದೆ.
ಕೇಂದ್ರ ಜಲ ಸಂಪನ್ಮೂಲ ಕಾರ್ಯದರ್ಶಿ ಡಿ. ವಿ. ಸಿಂಗ್ ನೇತೃತ್ವದ ತಂಡ ತಮಿಳುನಾಡು ಮುಖ್ಯ ಕಾರ್ಯದರ್ಶಿ ದೇವೇಂದ್ರನಾಥ ಸಾರಂಗಿ ಹಾಗೂ ಇತರರೊಂದಿಗೆ ಜಲಾಶಯದ ನೀರಿನ ಮಟ್ಟ ಮತ್ತು ಕಾವೇರಿ ಆಶ್ರಿತ ಬೆಳೆಗಳ ಕುರಿತು ಚರ್ಚಿಸಿದರು.
ರೈತರ ಪ್ರತಿಭಟನೆ: ಕಾವೇರಿ ಜಲಾನಯನ ಪ್ರದೇಶಗಳಿಗೆ ಕರ್ನಾಟಕವು ಕನಿಷ್ಠ 2 ಟಿಎಂಸಿ ನೀರನ್ನು ಬಿಡಬೇಕೆಂದು ಒತ್ತಾಯಿಸಿ ರೈಲು ತಡೆ ನಡೆಸಿದ ನೂರಾರು ರೈತರನ್ನು ಗುರುವಾರ ತಂಜಾವೂರಿನಲ್ಲಿ ಬಂಧಿಸಲಾಯಿತು.
ವಸ್ತುಸ್ಥಿತಿಯ ಅಧ್ಯಯನ ನಡೆಸುವ ಸಲುವಾಗಿ ಕೇಂದ್ರ ತಂಡ ಭೇಟಿ ನೀಡಿದ್ದರೂ ತಂಜಾವೂರು, ಕುಂಭಕೋಣಂ ಮತ್ತು ನಾಗಪಟ್ಟಣಂ ಸೇರಿದಂತೆ ಹಲವೆಡೆಗಳಲ್ಲಿ ಪ್ರತಿಭಟನೆ ನಡೆಸಿದರು.
ಸುಪ್ರೀಂಕೋರ್ಟ್ ಆದೇಶಕ್ಕೆ ತಲೆಬಾಗಿ ಕರ್ನಾಟಕ, ತಮಿಳುನಾಡಿಗೆ ನೀರು ಹರಿಸಿದರೂ ಮರಳು ಗಣಿಗಾರಿಕೆಯಿಂದಾಗಿ ಕಾಲುವೆಯಲ್ಲಿ ನೀರು ಸಮರ್ಪಕವಾಗಿ ಹರಿದುಬರುತ್ತಿಲ್ಲ ಎಂದು ರೈತರು ದೂರಿದರು.