ನವದೆಹಲಿ (ಐಎಎನ್ಎಸ್): ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ನಾಲ್ವರ ಮೇಲಿನ ಆರೋಪ ಸಾಬೀತಾಗಿದ್ದು, ಸ್ಥಳೀಯ ನ್ಯಾಯಾಲಯ ಬುಧವಾರ ಶಿಕ್ಷೆಯ ಪ್ರಮಾಣ ಪ್ರಕಟಿಸಲಿದೆ.
ಸಾಮೂಹಿಕ ಅತ್ಯಾಚಾರ, ಕೊಲೆ, ಯುವತಿಯ ಗೆಳೆಯನ ಮೇಲೆ ನಡೆದ ಕೊಲೆ ಉದ್ದೇಶಿತ ದಾಳಿ, ಸಾಕ್ಷ್ಯ ನಾಶ ಹಾಗೂ ದರೋಡೆ ಸೇರಿದಂತೆ ಹಲವು ಅಪರಾಧಗಳ ಅಡಿಯಲ್ಲಿ ನಾಲ್ವರೂ ತಪ್ಪಿತಸ್ಥರು ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಯೋಗೇಶ್ ಖನ್ನಾ ತೀರ್ಪು ನೀಡಿದ್ದಾರೆ. ಮುಖೇಶ್, ಪವನ್ ಗುಪ್ತಾ, ವಿನಯ್ ಶರ್ಮ ಹಾಗೂ ಅಕ್ಷಯ್ ಠಾಕೂರ್ ಪ್ರಕರಣದ ಆರೋಪಿಗಳಾಗಿದ್ದಾರೆ.
ಅಪರಾಧ ಎಸೆಗಿದಾಗಿನಿಂದ ಜೈಲಿನಲ್ಲಿದ್ದ ನಾಲ್ವರು ಆರೋಪಿಗಳು ತೀರ್ಪಿನ ವೇಳೆ ಮಂಗಳವಾರ ನ್ಯಾಯಾಲಯದಲ್ಲಿ ಹಾಜರಿದ್ದರು.
`ಸಾಮೂಹಿಕ ಅತ್ಯಾಚಾರ, ಅಸಹಾಯಕ ಯುವತಿಯ ಕೊಲೆ, ದೂರುದಾರ ಮೇಲಿನ ಕೊಲೆ ಉದ್ದೇಶಿತ ದಾಳಿ (ಯುವತಿಯ ಗೆಳೆಯ), ಪಿತೂರಿ, ಸಮಾನ ಉದ್ದೇಶ, ಸಾಕ್ಷ್ಯ ನಾಶ ಹಿನ್ನೆಲೆ ಎಲ್ಲಾ ಆರೋಪಿಗಳನ್ನು ನಾನು ದೋಷಿಗಳನ್ನಾಗಿಸುತ್ತಿದ್ದೇನೆ' ಎಂದು ತೀರ್ಪಿನ ವೇಳೆ ಖನ್ನಾ ತಿಳಿಸಿದ್ದಾರೆ.
ಪ್ರಕರಣದಲ್ಲಿ ಅಪರಾಧಿಗಳಿಗೆ ಗರಿಷ್ಠ ಜೀವಾವಧಿ ಶಿಕ್ಷೆಯಾಗುವ ಸಾಧ್ಯತೆಗಳಿವೆ.
ಹಿನ್ನೆಲೆ: 2012 ಡಿಸೆಂಬರ್ 16 ರಂದು 23 ವರ್ಷ ವಯಸ್ಸಿನ ಫಿಜಿಯೊತೆರಪಿಸ್ಟ್ ವಿದ್ಯಾರ್ಥಿನಿ ತನ್ನ ಗೆಳೆಯನ ಜೊತೆಗಿದ್ದಾಗ ಚಲಿಸುವ ಬಸ್ನಲ್ಲಿ ಆರು ಜನರಿಂದ ಅತ್ಯಾಚಾರಕ್ಕೆ ಒಳಗಾಗಿದ್ದಳು. ಬಳಿಕ ಚಿಕಿತ್ಸೆ ಫಲಿಸದೇ ಸಿಂಗಾಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿ ಡಿಸೆಂಬರ್ 29 ರಂದು ಕೊನೆಯುಸಿರೆಳೆದಿದ್ದಳು.
ಈ ಅತ್ಯಾಚಾರ ಘಟನೆ ದೇಶಾದ್ಯಂತ ವ್ಯಾಪಕ ಖಂಡನೆ ಹಾಗೂ ಪ್ರತಿಭಟನೆಗೆ ಕಾರಣವಾಗಿದ್ದಲ್ಲದೇ ಕಠಿಣ ಅತ್ಯಾಚಾರ ವಿರೋಧಿ ಕಾನೂನು ರೂಪಿಸಲು ಸರ್ಕಾರಕ್ಕೆ ಪ್ರೋತ್ಸಾಹ ನೀಡಿತ್ತು.
ಪ್ರಕರಣದ ಒಟ್ಟು ಆರು ಆರೋಪಿಗಳ ಪೈಕಿ ಓರ್ವ ಆರೋಪಿ ದೆಹಲಿಯ ತಿಹಾರ್ ಜೈಲಿನಲ್ಲಿ ಸಾವನ್ನಪ್ಪಿದ್ದಾನೆ. ಇನ್ನೋರ್ವ ಆರೋಪಿ ಬಾಲ ಆರೋಪಿ ಎಂದು ಸಾಬೀತಾಗಿದ್ದರಿಂದ ಬಾಲಾಪರಾಧ ನ್ಯಾಯಮಂಡಳಿ ಅವನನ್ನು ಆಗಸ್ಟ್ 31 ರಂದು ಮೂರು ವರ್ಷಗಳ ಕಾಲ ಸುಧಾರಣಾ ನಿಲಯಕ್ಕೆ ಕಳುಹಿಸಿದೆ.