ಗುಡಿಬಂಡೆ: ಕಳೆದ ಒಂದು ತಿಂಗಳಿನಿಂದ ತೀವ್ರ ಕುತೂಹಲ ಕೆರಳಿಸಿದ್ದ ಚಿಕ್ಕಬಳ್ಳಾಪುರ ತಾಲ್ಲೂಕು ಕಾಚೂರು ಗ್ರಾಮದ ನಾಗರತ್ನಮ್ಮ (40) ಕೊಲೆ ಪ್ರಕರಣದ ರಹಸ್ಯ ಕೊನೆಗೂ ಬಯಲಾಗಿದೆ.
ಜಮೀನು ಹಂಚಿಕೆ ವಿವಾದ ಮತ್ತು ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಘಟಿಸಿದ ಕೊಲೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಗುಡಿಬಂಡೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಆಂಧ್ರಪ್ರದೇಶದ ಹಿಂದೂಪುರದ ನಾಸೀರ್ ಅಹಮದ್ (36), ಸಿಕಂದರ್ (35), ಪರಗಿಯ ನಿವಾಸಿ ಲಿಂಗಾರೆಡ್ಡಿ (29) ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೂಲಿಬೆಲೆಯ ವೀರೇಂದ್ರ (26) ಕೊಲೆ ಆರೋಪಿಗಳಾಗಿದ್ದು, ಅವರಿಂದ ಮಾರುತಿ ಒಮ್ನಿ ವಾಹನ ವಶಪಡಿಸಿಕೊಳ್ಳಲಾಗಿದೆ.
ಕಾಚೂರು ಗ್ರಾಮದ ನಾಗರಾಜ್ ಅವರ ಪತ್ನಿ ನಾಗರತ್ನಮ್ಮ ಮತ್ತು ಮೊಮ್ಮಗ ಯಶವಂತ್ ನ. 9ರಂದು ವರ್ಲಕೊಂಡ ಸಮೀಪದ ಬಂಡಹಳ್ಳಿ ಅರಣ್ಯ ಪ್ರದೇಶದಲ್ಲಿ ಹೋಗುತ್ತಿದ್ದ ವೇಳೆ ನಾಲ್ವರು ದುಷ್ಕರ್ಮಿಗಳು ನಾಗರತ್ನಮ್ಮ ಕತ್ತು ಕುಯ್ದು ಕೊಲೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ವಿವರ: ನಾಗರಾಜುಗೆ ಇಬ್ಬರು ಪತ್ನಿಯರು. ಮೊದಲನೇ ಪತ್ನಿ ಲಕ್ಷ್ಮಮ್ಮ, ಎರಡನೇ ಪತ್ನಿ ನಾಗರತ್ನಮ್ಮ. ಇಬ್ಬರೂ ಪತ್ನಿಯರ ನಡುವೆ ಜಮೀನಿಗೆ ಸಂಬಂಧಿಸಿದಂತೆ ವಿವಾದ ಮತ್ತು ದ್ವೇಷವಿತ್ತು. ನಾಗರತ್ನಮ್ಮ ಕಡೆಯವರು ಪದೇ ಪದೇ ತಗಾದೆ ತೆಗೆದು ಲಕ್ಷ್ಮಮ್ಮ ಕಡೆಯವರನ್ನು ಪೊಲೀಸ್ ಠಾಣೆಗೆ ಕರೆಸಿಕೊಳ್ಳುತ್ತಿದ್ದರಂತೆ. ಇಲ್ಲಸಲ್ಲದ ಕಾರಣಗಳಿಗೆ ಇಬ್ಬರ ಮಧ್ಯೆ ತಂಟೆ–ತಕರಾರು ಆಗುತ್ತಿತ್ತಂತೆ. ಇದರಿಂದ ಬೇಸತ್ತ ಲಕ್ಷ್ಮಮ್ಮ, ಆಕೆಯ ಮಕ್ಕಳು ಮತ್ತು ಮೊಮ್ಮಕ್ಕಳು ನಾಗರತ್ನಮ್ಮ ಕೊಲೆಗೆ ಸಂಚು ರೂಪಿಸಲು ಆರಂಭಿಸಿದರು.
ಲಕ್ಷ್ಮಮ್ಮನ ಮಕ್ಕಳಾದ ಬೀರೇಶ್ ಮತ್ತು ರಾಜೇಶ್ ತಮ್ಮ ಸ್ನೇಹಿತ ಸೂಲಿಬೆಲೆ ವೀರೇಂದ್ರ ಮೂಲಕ ಲಿಂಗಾರೆಡ್ಡಿ ಎಂಬಾತನನ್ನು ಸಂಪರ್ಕಿಸಿದ್ದಾರೆ. ಕೊಲೆಗೆ 2 ಲಕ್ಷ ರೂಪಾಯಿ ಸುಪಾಯಿ ನಿಗದಿಪಡಿಸಿಕೊಂಡಿದ್ದಾರೆ. ಒಟ್ಟು 30 ಸಾವಿರ ರೂಪಾಯಿಯನ್ನು ಕೃತ್ಯಕ್ಕೂ ಮೊದಲು ಕೊಟ್ಟಿದ್ದಾರೆ. ಕೃತ್ಯಕ್ಕೆ ಬಳಸಲು ತಮ್ಮ ಮಾರುತಿ ಒಮ್ನಿಯನ್ನು ಸಹ ಕೊಟ್ಟಿದ್ದಾರೆ. ಹಣ ಪಡೆದ ಇಬ್ಬರೂ ಆರೋಪಿಗಳು ನಂತರ ಹಿಂದೂಪುರದಿಂದ ನಾಸೀರ್ ಅಹಮದ್ ಮತ್ತು ಸಿಕಂದರ್ ಎಂಬುವರನ್ನು ಕೃತ್ಯವೆಸಗಲು ಕರೆಸಿಕೊಂಡಿದ್ದಾರೆ.
ನ.9ರಂದು ನಾಗರತ್ನಮ್ಮ ಮತ್ತು ಮೊಮ್ಮಗ ಯಶವಂತ್ ವರ್ಲಕೊಂಡ ಸಮೀಪದ ದೇಗುಲಕ್ಕೆ ಹೋಗಿರುವುದನ್ನು ಖಚಿತಪಡಿಸಿಕೊಂಡ ಆರೋಪಿಗಳು ಅವರಿಬ್ಬರನ್ನೂ ಹಿಂಬಾಲಿಸಿದ್ದಾರೆ.
ನಂತರ ಒಮ್ನಿಯಲ್ಲಿ ಅಪಹರಿಸಿ ಬಂಡಹಳ್ಳಿ ಅರಣ್ಯಪ್ರದೇಶಕ್ಕೆ ಕರೆ ತಂದಿದ್ದಾರೆ. ಅಲ್ಲಿ ಆಕೆಯನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಮೊಮ್ಮಗ ಯಶವಂತ್ ಅಳುತ್ತಿದ್ದದ್ದನ್ನು ಕಂಡು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
ನಂತರ ದೇವನಹಳ್ಳಿ ಸಮೀಪ ನಾಲ್ವರು ಆರೋಪಿಗಳು ರಾಜೇಶ್ನಿಂದ ಬಾಕಿ 1.70 ಲಕ್ಷ ರೂಪಾಯಿ ಸುಪಾರಿ ಹಣ ಪಡೆದುಕೊಂಡಿದ್ದಾರೆ. ಕೊಲೆ ನಡೆದ ಕೆಲವೇ ಗಂಟೆಗಳಲ್ಲಿ ಬೀರೇಶ್ ಮತ್ತು ರಾಜೇಶ್ ಇಬ್ಬರನ್ನೂ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದೆವು. ತನಿಖೆ ನಂತರ ಕೊಲೆ ಆರೋಪಿಗಳು ಸಿಕ್ಕಿಬಿದ್ದರೆಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಿವಪ್ರಸಾದ್, ನಿವೃತ್ತ ಡಿವೈಎಸ್ಪಿ ಎ.ಬಿ.ದೇವಯ್ಯ ಮಾರ್ಗದರ್ಶನದಲ್ಲಿ ಗುಡಿಬಂಡೆ ಸರ್ಕಲ್ ಇನ್ಸ್ಪೆಕ್ಟರ್ ಶಿವಕುಮಾರ್, ಸಬ್ಇನ್ಸ್ಪೆಕ್ಟರ್ ನರಸಿಂಹಮೂರ್ತಿ, ಕಾನ್ಸ್ಟೆಬಲ್ಗಳಾದ ಅಶತ್ಥ್, ಮುರಳಿ, ಶ್ರೀನಾಥ್, ಶ್ರೀಪತಿ ಅವರನ್ನು ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.