ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ವರು ಕಳ್ಳರ ಬಂಧನ: ರೂ.70ಲಕ್ಷ ಮೌಲ್ಯದ ವಾಹನ ವಶ

Last Updated 12 ಡಿಸೆಂಬರ್ 2012, 19:50 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ವಾಹನ ಕಳ್ಳರನ್ನು ಬಂಧಿಸಿ ಸುಮಾರು 70 ಲಕ್ಷ ರೂಪಾಯಿ ಮೌಲ್ಯದ ವಾಹನಗಳನ್ನು ಜಪ್ತಿ ಮಾಡಿದ್ದಾರೆ.

ಅಂಜನಾನಗರದ ಕುಮಾರ (28), ಮಾಗಡಿ ಮುಖ್ಯರಸ್ತೆಯ ಗುರು (29), ಲಗ್ಗೆರೆಯ ಆನಂದ (36) ಮತ್ತು ದೀಪಾಂಜಲಿನಗರದ ಮಹೇಶ್ (30) ಬಂಧಿತರು. ಆರೋಪಿಗಳು ನಗರದ ಜ್ಞಾನಭಾರತಿ, ಆರ್‌ಎಂಸಿ ಯಾರ್ಡ್, ರಾಜರಾಜೇಶ್ವರಿನಗರ, ತುಮಕೂರು, ತಾವರೆಕೆರೆ, ರಾಮನಗರ ಠಾಣೆ ವ್ಯಾಪ್ತಿಯಲ್ಲಿ ಲಾರಿ, ಕಾರು, ಬೈಕ್‌ಗಳನ್ನು ಕಳವು ಮಾಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಬಂಧನ: ಬೈಕ್ ವಶ
ಬೈಕ್ ಕಳವು ಮಾಡುತ್ತಿದ್ದ ಆರೋಪದ ಮೇಲೆ ಶಿವಾಜಿನಗರದ ಫೈಜಾನ್ (20) ಎಂಬಾತನನ್ನು ಬಂಧಿಸಿರುವ ಭಾರತಿನಗರ ಪೊಲೀಸರು ಎರಡು ಲಕ್ಷ ರೂಪಾಯಿ ಮೌಲ್ಯದ ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಯು ಬೈಕ್‌ಗಳ ಬೀಗ ಮುರಿದು ಕಳವು ಮಾಡಿ ಮಾರಾಟ ಮಾಡುತ್ತಿದ್ದ. ಆತ ಭಾರತಿನಗರ, ಶಿವಾಜಿನಗರ ಠಾಣೆ ವ್ಯಾಪ್ತಿಯಲ್ಲಿ ಬೈಕ್‌ಗಳನ್ನು ಕಳವು ಮಾಡಿದ್ದ. ಆತನ ಬಂಧನದಿಂದ ಏಳು ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಸರಗಳ್ಳರ ಬಂಧನ:
ಸರಗಳ್ಳರನ್ನು ಬಂಧಿಸಿರುವ ಸಿಸಿಬಿ ಪೊಲೀಸರು 2.10 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರಗಳು ಹಾಗೂ ಬೈಕ್ ವಶಪಡಿಸಿಕೊಂಡಿದ್ದಾರೆ.

ಟ್ಯಾನರಿ ರಸ್ತೆಯ ಬರ್ಕತ್ (23) ಮತ್ತು ಹಳೆ ಬಾಗಲೂರು ಲೇಔಟ್‌ನ ಪಠಾಣ್ (23) ಬಂಧಿತರು. ಆರೋಪಿಗಳು ಬಾಣಸವಾಡಿ, ಎಚ್‌ಎಎಲ್ ಠಾಣೆ ವ್ಯಾಪ್ತಿಯಲ್ಲಿ ಸರಗಳವು ಮಾಡಿದ್ದರು.

ಅವರ ವಿರುದ್ಧ ಸಿಟಿ ಮಾರುಕಟ್ಟೆ, ದೇವರಜೀವನಹಳ್ಳಿ, ಹೆಣ್ಣೂರು, ಕೊತ್ತನೂರು ಮತ್ತು ಕಾಡುಗೊಂಡನಹಳ್ಳಿ ಠಾಣೆಯಲ್ಲಿ ಹಲವು ಅಪರಾಧ ಪ್ರಕರಣಗಳು ದಾಖಲಾಗಿದ್ದವು. ಅಲ್ಲದೇ ಅವರನ್ನು ಈ ಹಿಂದೆಯೇ ಮೂರು ಬಾರಿ ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾಗಿ ಅಪರಾಧ ಕೃತ್ಯಗಳನ್ನು ಮುಂದುವರಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಯುವಕನ ಕೊಲೆ
ಬೆಂಗಳೂರು: ಯುವಕನನ್ನು ಕೊಲೆ ಮಾಡಿದ ದುಷ್ಕರ್ಮಿಗಳು ಶವವನ್ನು ಬೈಕ್‌ನಲ್ಲಿ ತಂದು ಗರುಡಾಚಾರ್ ಪಾಳ್ಯದ ಬಳಿ ಸುಟ್ಟು ಹಾಕಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ಮೃತ ಯುವಕನ ಗುರುತು ಪತ್ತೆಯಾಗಿಲ್ಲ. ಆತನ ವಯಸ್ಸು ಸುಮಾರು 20 ರಿಂದ 25 ವರ್ಷವಿರಬಹುದು.
ಘಟನೆ ಸಂಬಂಧ ಗರುಡಾಚಾರ್ ಪಾಳ್ಯದ ನಿವಾಸಿ ವೇಣುಗೋಪಾಲ್ ಎಂಬುವರು ದೂರು ಕೊಟ್ಟಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಮಹದೇವಪುರ ಪೊಲೀಸರು ತಿಳಿಸಿದ್ದಾರೆ.

`ರಾತ್ರಿ ಎಂಟು ಗಂಟೆ ಸುಮಾರಿಗೆ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು, ಗರುಡಾಚಾರ್ ಪಾಳ್ಯದ ಬಳಿ ಮೂಟೆಯೊಂದನ್ನು ಎಸೆದರು. ಬಳಿಕ ಆ ಮೂಟೆಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಪರಾರಿಯಾದರು. ಅನುಮಾನಗೊಂಡು ಹತ್ತಿರ ಹೋಗಿ ನೋಡಿದಾಗ ಶವ ಸಂಪೂರ್ಣ ಸುಟ್ಟು ಹೋಗಿತ್ತು' ಎಂದು ವೇಣುಗೋಪಾಲ್ ದೂರಿನಲ್ಲಿ ತಿಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT