ಬೆಂಗಳೂರು: ಕಳೆದ ನಾಲ್ಕು ವರ್ಷಗಳಿಂದ ಸರ್ಜಾಪುರದ ‘ಬಾನಿಧಿ’ ಎಂಬ ಹೆಸರಿನ ಇಟ್ಟಿಗೆ ಕಾರ್ಖಾನೆಯಲ್ಲಿ ಜೀತದಾಳುಗಳಂತೆ ದುಡಿಯುತ್ತಿದ್ದ ನಾಲ್ವರು ಕಾರ್ಮಿಕರನ್ನು ಹಾಗೂ ಒಂದು ವರ್ಷದ ಮಗುವನ್ನು ಶುಕ್ರವಾರ ರಕ್ಷಿಸಲಾಗಿದೆ.
ಒಡಿಶಾ ಮೂಲದ ರಾಸ್ಕಿಲ್ ಭೋಯ್ಕ್ (25), ತುಲಸಾ ಬಾರಿಕ್ (35), ಅವರ ಮಗ ಮದ್ಬಾರಿಕ್ (17), ಬಾಸಂತಿ ಚಂದಾ (45) ಮತ್ತು ಅವರು ಒಂದು ವರ್ಷದ ಮಗು ನಿಸಾ ಚಾಂದಾ ಅವರನ್ನು ರಕ್ಷಿಸಲಾಗಿದೆ. ಕಾರ್ಖಾನೆ ಮಾಲೀಕ ಮಧು ವಿರುದ್ಧ ಸ್ಥಳೀಯ ಠಾಣೆಯಲ್ಲಿ ದೂರು ದಾಖಲಿಸಲಾಗುವುದು ಎಂದು ಕಾರ್ಯಾಚರಣಾ ತಂಡದಲ್ಲಿದ್ದ ಸ್ವಯಂ ಸೇವಾ ಸಂಸ್ಥೆಯ (ಎನ್ಜಿಒ) ಸದಸ್ಯರು ಹೇಳಿದ್ದಾರೆ.
ಇದೇ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಬಾಸಂತಿ ಚಂದಾ ಅವರ ಪತಿ ಬೀರೇಂದ್ರ ಸಿಂಗ್, 15 ದಿನಗಳ ಹಿಂದೆ ಇಲ್ಲಿಂದ ತಪ್ಪಿಸಿಕೊಂಡು ಒಡಿಶಾಗೆ ಹೋಗಿದ್ದರು. ಬಳಿಕ ಎನ್ಜಿಒ ಸದಸ್ಯರನ್ನು ಭೇಟಿ ಮಾಡಿದ ಅವರು, ಪತ್ನಿ–ಮಗು ಸೇರಿದಂತೆ ಐದು ಮಂದಿಯನ್ನು ಕಾರ್ಖಾನೆಯಲ್ಲಿ ಬಂಧಿಸಿಟ್ಟು, ಅಕ್ರಮವಾಗಿ ದುಡಿಸಿಕೊಳ್ಳಲಾಗುತ್ತಿದೆ ಅಳಲು ತೋಡಿಕೊಂಡಿದ್ದರು.
ಆ ಎನ್ಜಿಒ ಸದಸ್ಯರು ನೀಡಿದ ಮಾಹಿತಿ ಆಧರಿಸಿ ಕಾರ್ಮಿಕ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆನೇಕಲ್ ತಹಶೀಲ್ದಾರ್, ಮಾನವ ಹಕ್ಕುಗಳ ಆಯೋಗ ಹಾಗೂ ವಿವಿಧ ಸ್ವಯಂಸೇವ ಸಂಸ್ಥೆಗಳ ಸದಸ್ಯರು ಪಾಲ್ಗೊಂಡಿದ್ದರು.
‘ಸಾವಿರ ಇಟ್ಟಿಗೆ ಮಾಡಿದರೆ ₨ 500 ಕೊಡುವುದಾಗಿ ಹೇಳಿದ್ದರು. ಆದರೆ, ಕೇವಲ ₨ 300 ನೀಡಲಾಗುತ್ತಿತ್ತು. ಬೆಳಿಗ್ಗೆ 7 ಗಂಟೆಯಿಂದ ಸಂಜೆ 4 ಗಂಟೆವರೆಗೂ ದುಡಿಯುತ್ತಿದ್ದೆವು’ ಎಂದು ಕಾರ್ಮಿಕರು ಹೇಳಿದರು.