ಸೊರಬ: ತಾಲ್ಲೂಕಿನ ಕ್ಯಾಸನೂರು ಗುರುಬಸವ ದೇವರ ಸಂಸ್ಥಾನ ಮಠದಲ್ಲಿ ಜ. 29ರಂದುಗುರುಬಸವ ದೇವರ ಮಠದ ಕರ್ತೃ ಗದ್ದುಗೆಯ ನೂತನ ಕಟ್ಟಡಪ್ರವೇಶ ಸಮಾರಂಭ ನಡೆಯಲಿದೆ ಎಂದು ಮಠದ ಗುರು ಬಸವ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀ ತಿಳಿಸಿದರು.
ಅದೇ ದಿನ ಕರ್ತೃ ಗದ್ದುಗೆ, ಪಂಡಿತಾರಾಧ್ಯರು, ಗಣೇಶ, ಚೌಡೇಶ್ವರಿ, ಭೈರವೇಶ್ವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಶಿಖರ ಕಲಶಾರೋಹಣ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.
ಶ್ರೀಶೈಲ ಸೂರ್ಯ ಸಿಂಹಾಸನಾಧೀಶ್ವರ ಲಿಂ. ಉಮಾಪತಿ ಪಂಡಿತಾರಾಧ್ಯ, ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ, ವೀರಾಪುರ ಸಂಗಮೇಶ್ವರ ಸ್ವಾಮೀಜಿ ಮಾರ್ಗದರ್ಶನ, ಗೊಗ್ಗೆಹಳ್ಳಿ ಮಠದ ಸ್ವಾಮೀಜಿ ನೇತೃತ್ವದಲ್ಲಿ ಧರ್ಮಸಭೆ ಜರುಗಲಿದೆ.
ತೊಗರ್ಸಿಯ ಮಳೆ ಹಿರೇಮಠ , ಪಂಚವಣ್ಣಿಗೆ ಮಠ, ತರಿಕೆರೆಯ ನಂದಿಪುರ ಹಿರೇಮಠ, ಶಿರಾಳಕೊಪ್ಪ, ಜಡೆ ಸಂಸ್ಥಾನ ಮಠ, ಹಿರೇಮಠ, ಅಂಕುಶದೊಡ್ಡಿ, ದೇವರ ಭೂಪರ, ಮೂಡಿ ಹಾಗೂ ಕೂಡ್ಲಿಗಿ ಹಿರೇಮಠದ ಶ್ರೀಗಳು, ಮಲೆನಾಡು ವೀರಶೈವ ಮಠಾಧೀಶರ ಪರಿಷತ್ತಿನ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದ ಅವರು, ಸಮಸ್ತ ಭಕ್ತಾದಿಗಳು ಆಗಮಿಸಿ ಗುರುಕೃಪೆಗೆ ಪಾತ್ರರಾಗಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಈಚೆಗೆ ಅವರು ಮನವಿ ಮಾಡಿದರು.
ಮಠದಲ್ಲಿ ಪ್ರತಿ ಅಮಾವಾಸ್ಯೆಯಂದು ಸತ್ಸಂಗ, ಅನ್ನದಾಸೋಹ, ಶ್ರಮದಾನ, ಧರ್ಮ ಸಭೆ ನಡೆಯುತ್ತಿದ್ದು, ಅನಾಥಾಶ್ರಮ, ವೃದ್ಧಾಶ್ರಮ ನಿರ್ಮಿಸುವ ಚಿಂತನೆ ಇದೆ.
ಒಂದು ವರ್ಗ, ಜಾತಿಗೆ ಸೀಮಿತವಾಗದೆ ಮಠ ಕಾರ್ಯ ನಿರ್ವಹಿಸುತ್ತಿದ್ದು, ಅದೇ ಪರಿಕಲ್ಪನೆ ಮುಂದುವರೆಯುತ್ತದೆ ಎಂದರು.