ದಾವಣಗೆರೆ: ನಗರ ಅಕ್ಕಮಹಾದೇವಿ ಕಲ್ಯಾಣಮಂಟಪದಲ್ಲಿ ಆ. 18ರಂದು ದಾವಣಗೆರೆ ಜಿಲ್ಲಾ ಪದವೀಧರರ ಪರಿಷತ್ ಉದ್ಘಾಟನೆಯಾಗಲಿದೆ ಎಂದು ಪರಿಷತ್ನ ಜಿಲ್ಲಾ ಘಟಕದ ಅಧ್ಯಕ್ಷ ವಿ. ಗೋಪಾಲ್ ತಿಳಿಸಿದರು.
ಅಂದು ಬೆಳಿಗ್ಗೆ 11.30ಕ್ಕೆ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಚಿವ ಎಸ್.ಎ. ರವೀಂದ್ರನಾಥ್, ವಿಧಾನ ಪರಿಷತ್ ಮುಖ್ಯಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ, ಶಾಸಕ ಶಾಮನೂರು ಶಿವಶಂಕರಪ್ಪ ಮತ್ತು ಇತರ ಗಣ್ಯರು ಭಾಗವಹಿಸುವರು ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ಪರಿಷತ್ ಈಗಾಗಲೇ 800 ಸದಸ್ಯರಾಗಿದ್ದಾರೆ. ನಿರುದ್ಯೋಗಿ ಪದವೀಧರರಿಗೆ ಪರಿಷತ್ನ ಸದಸ್ಯತ್ವ ನೋಂದಣಿಯಲ್ಲಿ ಶುಲ್ಕ ವಿನಾಯ್ತಿ ನೀಡಲಾಗಿದೆ. ಮುಖ್ಯವಾಗಿ ಪರಿಷತ್ ಯಾವುದೇ ಜಾತಿ, ಜನಾಂಗ ಅಥವಾ ಧರ್ಮಕ್ಕೆ ಸೀಮಿತವಾಗಿಲ್ಲ. ಎಲ್ಲಾ ಪದವೀಧರರು ಮುಕ್ತವಾಗಿ ಸದಸ್ಯತ್ವ ಹೊಂದಬಹುದು ಎಂದರು.
ಪದವೀಧರರ ಶ್ರೇಯೋಭಿವೃದ್ಧಿಗಾಗಿ ಸಮಾನ ಮನಸ್ಕ ಪದವೀಧರರು ಒಂದಾಗಿ ಸಂಘಟಿಸಿರುವ ಪರಿಷತ್, ನಿರುದ್ಯೋಗಿ ಪದವೀಧರರ ಕ್ಷೇಮಾಭಿವೃದ್ಧಿಗೆ ಶ್ರಮಿಸಲಿದೆ. ನಿರುದ್ಯೋಗಿ ಪದವೀಧರರಿಗೆ ಸ್ವಉದ್ಯೋಗ ತರಬೇತಿ, ಪದವೀಧರರ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪನೆ, ನಿರುದ್ಯೋಗ ಭತ್ಯೆಗಾಗಿ ಸರ್ಕಾರಕ್ಕೆ ಪ್ರಸ್ತಾವ ಇತ್ಯಾದಿ ಯೋಜನೆಗಳನ್ನು ಪರಿಷತ್ ವತಿಯಿಂದ ಸಾಕಾರಗೊಳಿಸುವ ಚಿಂತನೆ ಇದೆ ಎಂದು ಗೋಪಾಲ್ ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪರಿಷತ್ನ ಪದಾಧಿಕಾರಿಗಳಾದ ಕೆ.ಒ. ತಿಪ್ಪೇಸ್ವಾಮಿ, ಪಿ.ಬಿ. ಮಂಜುನಾಥ್, ಕರಿಯಪ್ಪ, ಎಸ್. ನೇತ್ರಾವತಿ, ಎ.ಎಚ್. ಹೊನ್ನಪ್ಪ, ಟಿ.ಎಲ್. ಜಯರಾಜ್ನಾಯ್ಕ, ನಾಗರಾಜ್ ತಳವಾರ್, ಸಿ. ರಾಜಪ್ಪ ಹಾಜರಿದ್ದರು.