ಶಿವಮೊಗ್ಗ: ತುರ್ತು ಸಂದರ್ಭದಲ್ಲಿ ಅಲೋಪತಿ ಔಷಧ ಬಳಸಲು ಅನುಮತಿ ನೀಡಬೇಕೆಂಬ ಒಂದಂಶದ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ, ವೃತ್ತಿ ಆಯುಷ್ ವೈದ್ಯರು ಜುಲೈ 20ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ.
20ರಂದು ನಗರದ ಜಿಲ್ಲಾ ಆಯುರ್ವೇದ ಆಸ್ಪತ್ರೆಯಿಂದ ಹೊರಡುವ ಪ್ರತಿಭಟನಾ ಮೆರವಣಿಗೆ, ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಿದೆ. 21 ರಂದು ರಾತ್ರಿ ಬೆಂಗಳೂರಿಗೆ ತೆರಳಿ `ಬೆಂಗಳೂರು ಚಲೋ~ ಹಮ್ಮಿಕೊಂಡಿದ್ದು, 22ರಂದು ಫ್ರೀಡಂಪಾರ್ಕ್ನಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ಆಯುಷ್ ಫೆಡರೇಷನ್ ಆಫ್ ಇಂಡಿಯಾ ಜಿಲ್ಲಾ ಶಾಖೆ ಸಲಹಾ ಸಮಿತಿ ಅಧ್ಯಕ್ಷ ಡಾ.ಗುರುರಾಜ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದೇಶದ 12 ರಾಜ್ಯಗಳಲ್ಲಿ ಈಗಾಗಲೇ ಆಯುಷ್ ವೈದ್ಯರಿಗೆ ತುರ್ತು ಸಂದರ್ಭದಲ್ಲಿ ಅಲೋಪತಿ ಔಷಧ ಬಳಸಲು ಅಲ್ಲಿನ ಸರ್ಕಾರಗಳು ಅನುಮತಿ ನೀಡಿವೆ. ಆದರೆ, ರಾಜ್ಯದಲ್ಲಿ ಇದಕ್ಕೆ ಕಾನೂನಾತ್ಮಕವಾಗಿ ಅವಕಾಶ ಕಲ್ಪಿಸಿಲ್ಲ ಎಂದು ಅವರು ದೂರಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಖೆಯ ಡಾ.ಎಂ.ಎಸ್. ಸಂತೋಷಕುಮಾರ್, ಡಾ.ಶಶಿಕಾಂತ್, ಡಾ.ಎ.ಕೆ.ಜೆ. ರಾವ್, ಡಾ.ಕಲ್ಯಾಣಕುಮಾರ್ ಕರಡಿಮಠ ಹಾಜರಿದ್ದರು.