ನವದೆಹಲಿ (ಪಿಟಿಐ): ತಾಲಿಬಾನ್ ಸಂಘಟನೆ ಜೊತೆ ನಿಕಟ ಸಂಪರ್ಕ ಹೊಂದಿರುವ ಹಖಾನಿ ಉಗ್ರರ ಜಾಲವನ್ನು ದಮನ ಮಾಡುವಲ್ಲಿ ಪಾಕಿಸ್ತಾನದ ನಿರಾಸಕ್ತಿಯಿಂದಾಗಿ ಆಫ್ಘಾನಿಸ್ತಾನದ ಕರ್ಜೈ ಸರ್ಕಾರ ತೀವ್ರ ಭ್ರಮನಿರಸನಗೊಂಡಿದೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಆಫ್ಘಾನಿಸ್ತಾನವು ಭಾರತದ ಜೊತೆಗಿನ ತನ್ನ ಮೈತ್ರಿಯನ್ನು ಮತ್ತಷ್ಟು ಗಟ್ಟಿಗೊಳಿಸುವ ಚಿಂತನೆ ನಡೆಸಿದೆ.
ಮಂಗಳವಾರದಿಂದ ಎರಡು ದಿನಗಳ ಕಾಲ ಭಾರತ ಪ್ರವಾಸ ಕೈಗೊಳ್ಳಲಿರುವ ಆಫ್ಘಾನಿಸ್ತಾನದ ಅಧ್ಯಕ್ಷ ಹಮೀದ್ ಕರ್ಜೈ ಅವರು ತಮ್ಮ ಈ ಪ್ರವಾಸದ ಸಂದರ್ಭದಲ್ಲಿ ಹಲವಾರು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆ ಇದೆ.
ಪ್ರಧಾನಿ ಸಿಂಗ್ ಅವರೊಂದಿಗೆ ಚರ್ಚಿಸಲಿರುವ ಕರ್ಜೈ ಭದ್ರತೆ, ಗಣಿ ಸೇರಿದಂತೆ ಉಭಯ ದೇಶಗಳ ನಡುವೆ ಹತ್ತು ಹಲವು ಕ್ಷೇತ್ರಗಳಲ್ಲಿನ ಯೋಜನೆಗಳಿಗೆ ಪರಸ್ಪರ ಸಹಕಾರ ನೀಡುವ ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ.
ರಬ್ಬಾನಿ ಕೊಲೆ ಹಿಂದೆ ಐಎಸ್ಐ ಸಂಚು? : ಹತ್ಯೆಗೀಡಾಗಿರುವ ಆಫ್ಘಾನಿಸ್ತಾನದಲ್ಲಿನ ಶಾಂತಿ ಮಾತುಕತೆಗಳ ನೇತಾರ ಬುರ್ಹಾನುದ್ದೀನ್ ರಬ್ಬಾನಿ ಹತ್ಯೆಯ ಹಿಂದೆ ಪಾಕಿಸ್ತಾನದ ಐಎಸ್ಐ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ.
ಪಾಕಿಸ್ತಾನದಲ್ಲಿನ ಹಖಾನಿ ಉಗ್ರಗಾಮಿಗಳ ಗುಂಪು ಈ ಹತ್ಯೆ ನಡೆಸಿರುವ ಸಾಧ್ಯತೆ ಇದೆ ಎಂದು ಆಫ್ಘಾನಿಸ್ತಾನದ ರಾಜತಾಂತ್ರಿಕ ಮೂಲಗಳು ಅಂದಾಜಿಸಿವೆ. ಹಖಾನಿ ಉಗ್ರರನ್ನು ಸದೆಬಡಿಯುವಲ್ಲಿ ಕಾಣದ ಶಕ್ತಿಗಳು ಪಾಕ್ ಸರ್ಕಾರದ ಕೈಕಟ್ಟಿ ಹಾಕಿವೆ ಎಂದು ಆಫ್ಘನಿಸ್ತಾನ ಸರ್ಕಾರ ಈಗ ಕುಪಿತಗೊಂಡಿದೆ.