ಶಿವಮೊಗ್ಗ: ಜಾರ್ಖಂಡ್ನ ಜಾರ್ಕ್ರಾಫ್ಟ್ ಸಂಸ್ಥೆ ಯುಗಾದಿ ಪ್ರಯುಕ್ತ ನಗರದ ರಾಯಲ್ ಆರ್ಕಿಡ್ ಹೋಟೆಲ್ನಲ್ಲಿ ಏ. 3ರಿಂದ 8ರವರೆಗೆ ಬೆಳಿಗ್ಗೆ 10.30ರಿಂದ ರಾತ್ರಿ 8.30ರವರೆಗೆ ರೇಷ್ಮೆಸೀರೆ ಮತ್ತು ಉತ್ಪನ್ನಗಳ ಮಾರಾಟ ಉತ್ಸವ ಆಯೋಜಿಸಿದೆ ಎಂದು ಸಂಸ್ಥೆ ಸಂಯೋಜಕ ಟಿ. ಅಭಿನಂದ್ ತಿಳಿಸಿದರು.
ರೇಷ್ಮೆ ಉತ್ಪಾದನೆಯಲ್ಲಿ ದೇಶ ಮುಂಚೂಣಿಯಲಿದ್ದು, ಜಾರ್ಖಂಡ್, ಬಿಹಾರ್ ಮತ್ತು ಛತ್ತೀಸ್ಘಡ್ ರಾಜ್ಯಗಳ ಉಷ್ಣವಲಯ ಅರಣ್ಯದಲ್ಲಿ ಬೆಳೆಯುವ ಕೆಲ ವೃಕ್ಷಗಳಲ್ಲಿ ನೈಸರ್ಗಿಕವಾಗಿ ರೇಷ್ಮೆ ಉತ್ಪಾದನೆ ಆಗುತ್ತದೆ. ಉತ್ಪನ್ನಗಳ ವೆಚ್ಚವೂ ಕಡಿಮೆ ಇರುತ್ತದೆ. ಆದ್ದರಿಂದ ಕಡಿಮೆ ಬೆಲೆಗೆ ವಸ್ತ್ರಗಳು ಉತ್ಸವದಲ್ಲಿ ಸಿಗಲಿವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.
ಸಿಲ್ಕ್ ಉತ್ಸವವನ್ನು ಏ. 3ರಂದು ಸಂಜೆ 4ಕ್ಕೆ ಜನಶಿಕ್ಷಣ ಸಂಸ್ಥೆ ನಿರ್ದೇಶಕಿ ಎಸ್.ವೈ. ಅರುಣಾದೇವಿ ಉದ್ಘಾಟಿಸುವರು. ಜಾರ್ಕ್ರಾಫ್ಟ್ ಪ್ರಾದೇಶಿಕ ವ್ಯವಸ್ಥಾಪಕ ಮುಖೇಶ್ ಕುಮಾರ್ ಗೋಪೆ ಉಪಸ್ಥಿತರಿರುವರು ಎಂದರು.
ಉತ್ಸವದಲ್ಲಿ ಕಾಶ್ಮೀರದಿಂದ ಕಂಚಿವರೆಗಿನ ರೇಷ್ಮೆ ಸೀರೆ ಉತ್ಪಾದಕರು, ವಿನ್ಯಾಸಕರು ಹಾಗೂ ರೇಷ್ಮೆ ಸಹಕಾರ ಸಂಘಗಳು 40ಕ್ಕೂ ಹೆಚ್ಚು ಮಳಿಗೆಗಳಲ್ಲಿ ರೇಷ್ಮೆ ಉತ್ಪನ್ನಗಳನ್ನು ಪ್ರದರ್ಶಿಸುವರು ಎಂದು ಹೇಳಿದರು.
ಮೇಳದಲ್ಲಿ ್ಙ 900ರಿಂದ 30 ಸಾವಿರದ ಮೌಲ್ಯದ ರೇಷ್ಮೆ ಸೀರೆಗಳು, ಕಂಚಿ ಸಿಲ್ಕ್ ಮತ್ತು ಮದುವೆ ಸೀರೆಗಳು, ಡಿಸೈನರ್ ಎಂಬ್ರಾಯ್ಡ್ರಿ, ಪಶ್ಮೀನಾ ಡುಪೇನ್, ಡಿಸೈನರ್ ಡ್ರೆಸ್ ಮೆಟಿರಿಯಲ್ಸ್ ಮಣಿಪುರಿ, ಕೊಲ್ಕತ್ತ ಸೀರೆಗಳು, ಕುಷನ್ ಕವರ್ಗಳು, ಬೆಡ್ಶೀಟ್ಗಳ ಮಾರಾಟ ಮಾಡಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಯೋಜಕ ಎ. ರಾಕೇಶ್ ರೈ ಉಪಸ್ಥಿತರಿದ್ದರು.