ಬೆಂಗಳೂರು: ಉನ್ನತ ಶಿಕ್ಷಣದ ವಿವಿಧ ಮಜಲುಗಳನ್ನು ಪರಿಚಯಿಸುವ, `ಪ್ರಜಾವಾಣಿ~, `ಡೆಕ್ಕನ್ ಹೆರಾಲ್ಡ್~ ಪ್ರಾಯೋಜಿತ `ಜ್ಞಾನದೇಗುಲ -2012~ ಎರಡು ದಿನಗಳ ಶಿಕ್ಷಣ ಮೇಳ ಇದೇ 26 ರ ಶನಿವಾರ ಹಾಗೂ 27 ರ ಭಾನುವಾರ ನಗರದ ಅರಮನೆ ಮೈದಾನದ ತ್ರಿಪುರ ವಾಸಿನಿ ಸಭಾಂಗಣದಲ್ಲಿ ನಡೆಯಲಿದೆ.
ಹಿರಿಯ ವಿಜ್ಞಾನಿ ಪ್ರೊ.ಸಿ.ಎನ್.ಆರ್.ರಾವ್ ಅವರು ಉದ್ಘಾಟನಾ ಕಾರ್ಯಕ್ರಮದಲ್ಲಿ `ವಿಜ್ಞಾನದ ಸಂಭ್ರಮಾಚರಣೆ~ ವಿಚಾರವಾಗಿ ಮಾತನಾಡಲಿದ್ದಾರೆ. ಉನ್ನತ ಶಿಕ್ಷಣದ ವಿವಿಧ ಸವಾಲುಗಳು, ಆವಿಷ್ಕಾರಗಳ ಬಗ್ಗೆ ಪ್ರೊ.ಅಶೋಕ್ ಮಿಶ್ರಾ ಮಾತನಾಡಲಿದ್ದಾರೆ. ಶಿಕ್ಷಣ ತಜ್ಞರಾದ ಪ್ರೊ.ಜಿ.ಎಲ್.ಶೇಖರ್, ಪ್ರೊ.ನಂದ ಕಿಶೋರ್ ಆಳ್ವಾ ಪಾಲ್ಗೊಳ್ಳಲಿದ್ದಾರೆ.
27 ರಂದು ನಡೆಯುವ ಕಾರ್ಯಕ್ರಮದಲ್ಲಿ ಶೇಷಾದ್ರಿಪುರ ಶಿಕ್ಷಣ ಸಂಸ್ಥೆಗಳ ಪ್ರಧಾನ ಕಾರ್ಯದರ್ಶಿ ಡಾ.ವೂಡೆ ಪಿ. ಕೃಷ್ಣ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿರ್ದೇಶಕಿ ರಶ್ಮಿ, ಅಂತರರಾಷ್ಟ್ರೀಯ ಮಾಹಿತಿ ನಿರ್ವಹಣಾ ಶಾಲೆಯ ನಿರ್ದೇಶಕಿ ಪ್ರೊ.ಶಾಲಿನಿ ಅರಸ್ ಮತ್ತು ಬೆಂಗಳೂರು ಅನಿಮೇಷನ್ ಕೈಗಾರಿಕೆಗಳ ಒಕ್ಕೂಟದ ಉಪಾಧ್ಯಕ್ಷ ಎಂ.ಆರ್.ಬಾಲಕೃಷ್ಣ ಉನ್ನತ ಶಿಕ್ಷಣದ ವಿಚಾರವಾಗಿ ಮಾತನಾಡಲಿದ್ದಾರೆ.ಶಿಕ್ಷಣ ಮೇಳದಲ್ಲಿ ನಡೆಯುವ ವಸ್ತು ಪ್ರದರ್ಶನದಲ್ಲಿ ಸುಮಾರು 50 ಕಾಲೇಜುಗಳು ಪಾಲ್ಗೊಳ್ಳಲಿವೆ.