ಮುಂಬೈ (ಪಿಟಿಐ): ಕೇಂದ್ರ ಸಂಪುಟದಲ್ಲಿ ಎರಡನೇಯ ಸ್ಥಾನ ನೀಡುವ ವಿಚಾರದಲ್ಲಿ ಕಾಂಗ್ರೆಸ್ನೊಂದಿಗೆ ಮುನಿಸಿಕೊಂಡಿದ್ದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಮುಖಂಡರು ಶನಿವಾರ `ನಾವು ಯಪಿಎ ಮೈತ್ರಿಕೂಟದಲ್ಲಿಯೇ ಇದ್ದೇವೆ~ ಎಂದು ಹೇಳುವ ಮೂಲಕ ಬಿರುಕು ಮುಚ್ಚುವ ಮಾತು ಆಡಿದ್ದಾರೆ.
ಎನ್ಸಿಪಿ ಮುಖ್ಯಸ್ಥರೂ ಆಗಿರುವ ಕೃಷಿ ಸಚಿವ ಶರದ್ ಪವಾರ್ ಅವರೊಂದಿಗೆ ದೆಹಲಿಯಿಂದ ಆಗಮಿಸಿದ ಬಹೃತ್ ಕೈಗಾರಿಕಾ ಖಾತೆ ಸಚಿವ ಪ್ರಫುಲ್ ಪಟೇಲ್ ಅವರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ `ನಾವು ಯುಪಿಎಯಲ್ಲೇ ಇದ್ದೇವೆ. ಮುಂದೆಯೂ ಈ ಮೈತ್ರಿಕೂಟದ ಪಾಲುದಾರರಾಗಿರುತ್ತೇವೆ. ಎಲ್ಲ ಕಾಲದಲ್ಲೂ ನಮ್ಮ ಬೆಂಬಲ ಪಡೆದಿರುವ ಕೇಂದ್ರ ಸರ್ಕಾರಕ್ಕೆ ನಮ್ಮ ಸಹಾಯ ನಿರಂತರವಾಗಿ ಭವಿಷ್ಯದಲ್ಲೂ ಮುಂದುವರಿಯಲಿದೆ~ ಎಂದು ಹೇಳಿದರು.
ಇದೇ ವೇಳೆ ಸರ್ಕಾರದಿಂದ ಹೊರ ಬಂದು ಕಾರ್ಯ ತಂತ್ರ ರಚಿಸುವ ನಿರ್ಧಾರದ ವಿಷಯವನ್ನು ತಳ್ಳಿ ಹಾಕಿದ ಅವರು ಕಾಂಗ್ರೆಸ್ ಮೈತ್ರಿಕೂಟದೊಂದಿಗೆ ಎನ್ಸಿಪಿಯು ಎಂಟು ವರ್ಷದ ಸ್ಥಿರ ಮೈತ್ರಿ ಹೊಂದಿದೆ ಎಂದು ಹೇಳಿದರು.
ಸರ್ಕಾರದಿಂದ ಹೊರ ಬರುವುದಾಗಿ `ಎನ್ಸಿಪಿ~ ಗುರುವಾರ ಪತ್ರ ಕಳುಹಿಸಿದ ನಂತರ ಹೊಸ ಬಿಕ್ಕಟ್ಟಿಗೆ ಸಿಲುಕಿದ ಕೇಂದ್ರ ಆಡಳಿತಾರೂಢ ಯುಪಿಎ ಮಿತ್ರ ಪಕ್ಷದ ಮನ ಒಲಿಸುವ ಪ್ರಯತ್ನ ನಡೆಸಿತ್ತು. ಕಾಂಗ್ರೆಸ್ನ ಕಸರತ್ತು ಪಟೇಲ್ ಅವರ ಹೇಳಿಕೆ ಗಮನಿಸಿದರೆ ಫಲಿಸಿದಂತಾಗಿದೆ.