ದೇವನಹಳ್ಳಿ ಹೊಸಕೋಟೆ ಮಾರ್ಗದಲ್ಲಿ ಹೊಸ ನಲ್ಲೂರು, ಬಾಲೆಪುರ, ಚೆನ್ನಹಳ್ಳಿ, ಅರಳೂರು ಮೂಲಕ ಸಂಚರಿಸುವ ನಗರ ಸಾರಿಗೆ ವಾಹನಗಳು ಸಮಯಕ್ಕೆ ಸರಿಯಾಗಿ ಸಂಚರಿಸುವುದಿಲ್ಲ.
ಬೆಳಿಗ್ಗೆ 8 ಗಂಟೆಯ ಬಸ್ಸು ಹೊರಟುಹೋದರೆ ಮತ್ತೆ ಸರ್ಕಾರಿ ಬಸ್ಸು ಬರುವುದು 9 ಗಂಟೆಗೆ. ಇದರಿಂದ ಕಾರ್ಮಿಕರಿಗೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ರೈತಾಪಿ ಜನರಿಗೆ ಬಹಳ ತೊಂದರೆಯಾಗಿದೆ. ಈ ರಸ್ತೆಯಲ್ಲಿ ಸಂಚರಿಸುವ ಆಟೊಗಳು ಜನರನ್ನು ಕುರಿಗಳಂತೆ ತುಂಬಿ ಸಂಚರಿಸುತ್ತವೆ. ತತ್ಪರಿಣಾಮ ನಗರ ಸಾರಿಗೆ ವಾಹನಗಳಲ್ಲಿ ಜನರ ಸಂಚಾರ ವಿರಳವಾಗಿರುತ್ತದೆ.
ಆದ್ದರಿಂದ ಬಿಎಂಟಿಸಿ ಅಧಿಕಾರಿಗಳು ಕೂಡಲೇ ಈ ಮಾರ್ಗದಲ್ಲಿ ಬಸ್ಸುಗಳ ಸಂಖ್ಯೆ ಹೆಚ್ಚಿಸುವ ಜೊತೆಗೆ ನಿಗದಿತ ವೇಳೆಗೆ ಸಂಚರಿಸುವಂತೆ ಕ್ರಮ ಕೈಗೊಳ್ಳಬೇಕು. ಜೊತೆಗೆ ಮಾಸಿಕ ಹಾಗೂ ದೈನಿಕ ಪಾಸುಗಳಿಗೂ ಅನುಮತಿ ನೀಡಬೇಕು. ಈ ಮೂಲಕ ಆಟೊಗಳಿಗೆ ಕಡಿವಾಣ ಹಾಕಬೇಕು ಎಂದು ವಿನಂತಿ.
-ಡಿ.ಎ. ಮಾರುತಿರಾಜ್
ಪೊಲೀಸ್ ಬೀಟ್ ತಪ್ಪದಿರಲಿ
ಜೆ.ಪಿ.ನಗರ ಪೊಲೀಸ್ ಠಾಣೆ ವ್ಯಾಪ್ತಿಗೆ ಒಳಪಡುವ ಕೆಲವು ಬಡಾವಣೆಗಳಿಗೆ ರಾತ್ರಿ ವೇಳೆಯಲ್ಲಿ ಬೀಟ್ ಪೊಲೀಸಿನವರು ಬರುವುದಿಲ್ಲ, ಹೊಯ್ಸಳ ವಾಹನವೂ ಸಹ ರಾತ್ರಿ ವೇಳೆ ಗಸ್ತು ತಿರುಗುತ್ತಿಲ್ಲ.
ಜೆ.ಪಿ.ನಗರದ 2, 3 ಹಾಗೂ 4ನೇ ಹಂತಗಳಲ್ಲಿ ಪೊಲೀಸ್ ಬೀಟ್ ಇಲ್ಲದೆ ಬಹಳ ದಿನಗಳೇ ಆದುವು. ಕೆಲವು ಕಡೆ `ಪಾಯಿಂಟ್ ಬುಕ್~ ಇಟ್ಟಿದ್ದರೂ ಅವರು ಸಹಿ ಮಾಡುತ್ತಿಲ್ಲ. ಒಂದು ದಿನ ಬಂದರೆ 15 ದಿವಸ ನಾಪತ್ತೆಯಾಗುತ್ತಾರೆ.
ಕಳ್ಳಕಾಕರು, ಬೀದಿ ಕಾಮಣ್ಣರ ಕಾಟ, ಸರಗಳ್ಳರು ಹಾಗೂ ಪಿಕ್ಪಾಕೆಟ್ ಸಮಸ್ಯೆ ಇದರಿಂದಾಗಿ ಜಾಸ್ತಿಯಾಗಿದೆ. ಆದ್ದರಿಂದ ಈ ಭಾಗಗಳಲ್ಲಿ ಪೊಲೀಸರನ್ನು ನಿಯೋಜಿಸಲು ಸೂಕ್ತ ಕ್ರಮಕೈಗೊಳ್ಳುವಂತೆ ಸಂಬಂಧಿತ ಅಧಿಕಾರಿಗಳಲ್ಲಿ ವಿನಂತಿಸಿಕೊಳ್ಳುತ್ತೇನೆ.
-ಸುಕಾರಾಂ