ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಇದೇ 15ರಿಂದ ಜನವರಿ 6ರ ವರೆಗೆ ನಡೆಸಲಿರುವ ಕೆಎಎಸ್ ಮುಖ್ಯ ಪರೀಕ್ಷೆಗಳನ್ನು ಮುಂದೂಡಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಮಂಗಳವಾರ ವಜಾ ಮಾಡಿದೆ.
ಇದರಿಂದಾಗಿ ಪೂರ್ವ ನಿಗದಿಯಂತೆ ಕೆಎಎಸ್ ಮುಖ್ಯ ಪರೀಕ್ಷೆ ನಡೆಯಲಿದೆ.
`ಪರೀಕ್ಷೆ ನಡೆಸುವುದು ಆಡಳಿತಾತ್ಮಕ ನಿರ್ಧಾರ. ಅದರಲ್ಲಿ ಮಧ್ಯಪ್ರವೇಶ ಮಾಡಲು ಇಚ್ಛಿಸುವುದಿಲ್ಲ. ನಾಲ್ಕಾರು ಅಭ್ಯರ್ಥಿಗಳ ಅನುಕೂಲಕ್ಕಾಗಿ ಸಹಸ್ರಾರು ಅಭ್ಯರ್ಥಿಗಳಿಗೆ ತೊಂದರೆ ಆಗಬಾರದು' ಎಂದು ಪೀಠ ಹೇಳಿದೆ.
`ಕೆಎಎಸ್ ಮುಖ್ಯ ಪರೀಕ್ಷೆ ಸಮಯದಲ್ಲೇ ವಲಯ ಅರಣ್ಯಾಧಿಕಾರಿ ಹುದ್ದೆಗಳ ಭರ್ತಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ. ಆದ್ದರಿಂದ ಕೆಎಎಸ್ ಪರೀಕ್ಷೆ ಮುಂದೂಡುವಂತೆ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ವಿಶ್ವನಾಥ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅದನ್ನು ವಜಾ ಮಾಡಿದ್ದ ಹೈಕೋರ್ಟ್, `ಅರ್ಜಿದಾರರು ಕೆಎಟಿ ಮೊರೆ ಹೋಗಬಹುದು' ಎಂದು ಹೇಳಿತ್ತು.