ಕಾರ್ಕಳ: ತಾಲ್ಲೂಕಿನ ನಿಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲವು ತಿಂಗಳಿನಿಂದ ನಿರಂತರ ಮತಾಂತರದ ಯತ್ನ ನಡೆಯುತ್ತಿದೆ. ಇಂತಹ ವ್ಯಕ್ತಿಗಳ ಮೇಲೆ ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ನಿಟ್ಟೆ ಗ್ರಾಮಸ್ಥರು ಸೇರಿ ನಿಟ್ಟೆ ಗ್ರಾಮ ಪಂಚಾಯಿತಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಗ್ರಾಮದ ಮುಗ್ಧ ಅಮಾಯಕ ಮಹಿಳೆಯರನ್ನು, ಮಕ್ಕಳನ್ನು ಹಾಗೂ ವಯೋವೃದ್ಧರನ್ನು ಹಣದ ಆಮಿಷವೊಡ್ಡಿ ಮತಾಂತರಗೊಳಿಸುವ ಪ್ರಕ್ರಿಯೆ ಗ್ರಾಮದಲ್ಲಿ ನಡೆಯುತ್ತಿದೆ. ಅಮಾಯಕ ಹಿಂದೂಗಳನ್ನು ಗ್ರಾಮದ ಕ್ರೈಸ್ತ ಮನೆಗಳಲ್ಲಿ ಒಟ್ಟು ಸೇರಿಸಿ ಸಭೆ ನಡೆಸುವುದು, ಮತಾಂತರಕ್ಕೆ ಒತ್ತಾಯ ಹೇರುವುದು, ಹಿಂದೂ ಧರ್ಮದ ದೇವರ ಅವಹೇಳನ, ತುಳಸಿ ಕಟ್ಟೆಗೆ ಕೈ ಮುಗಿಯವುದನ್ನು ವಿರೋಧಿಸಿ ಮಾತನಾಡುವುದು ನಡೆಯುತ್ತಿದೆ. ಇಲ್ಲಿ ನಡೆಯುವ ಪ್ರಾರ್ಥನೆಗಳಿಂದ ಪರಿಸರದ ಜನರ ಶಾಂತಿಗೆ ಭಂಗ ಬರುತ್ತಿದೆ.
ಇಂತವರ ಮೇಲೆ ಶೀಘ್ರ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ವಿಶ್ವ ಹಿಂದೂ ಪರಿಷತ್ನ ಜಿಲ್ಲಾ ಘಟಕದ ಉಪಾಧ್ಯಕ್ಷ ನಾರಾಯಣ ಮಣಿಯಾಣಿ ಮಾತನಾಡಿ, ಇತ್ತೀಚೆಗಷ್ಟೆ ನಿಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲಂಬಾಡಿ ಪದವು ಎಂಬಲ್ಲಿ ಹಾಗೂ ನಿಟ್ಟೆ ಗ್ರಾಮ ಪಂಚಾಯಿತಿ ಕಚೇರಿ ಸಮೀಪದಲ್ಲೇ ಮತಾಂತರಕ್ಕೆ ಯತ್ನಿಸುತ್ತಿದ್ದ ವಿಚಾರ ಬೆಳಕಿ ಬಂದಿದೆ. ಮುಂದಿನ ದಿನಗಳಲ್ಲಿ ಇದು ಇನ್ನೂ ಅಧಿಕಗೊಳ್ಳುವ ಸಾಧ್ಯತೆಯಿದೆ. ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಅವರ ಮೇಲೆ ಸೂಕ್ತಕ್ರಮವನ್ನು ಕೈಗೊಳ್ಳಬೇಕು ಎಂದರು.
ಪ್ರತಿಭಟನಾಕಾರರು ನಿಟ್ಟೆ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ನವೀನ್ ನಾಯಕ್ ಅತ್ತೂರು ಮಾತನಾಡಿ. ಮತಾಂತರ ಕುರಿತ ವಿಚಾರ ಗಮನಕ್ಕೆ ಬಂದಿದ್ದು, ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಲಾಗುವುದು ಎಂದರು.
ವಿಶ್ವ ಹಿಂದೂ ಪರಿಷತ್, ಬಜರಂಗದಳದ ಕಾರ್ಯಕರ್ತರಾದ ಸಂದೇಶ್ ಕಾಮತ್, ಸುರೇಶ್ ಭಟ್, ಬಾಲಕೃಷ್ಣ ಹೆಗ್ಡೆ, ಪ್ರದೀಪ್ ಬೇಲಾಡಿ, ರೋಶನ್ ಶೆಟ್ಟಿ, ಜೆ.ಡಿ.ಎಸ್ ವಕ್ತಾರ ದೀಪಕ್ ಕಾಮತ್ ಮತ್ತಿತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.