ಆಲಮಟ್ಟಿ: ನಿಡಗುಂದಿಯ ಶ್ರಿ ಬನಶಂಕರಿ ದೇವಿ ಜಾತ್ರೆ ಸೋಮವಾರ ಸಂಭ್ರಮ ಸಡಗರದಿಂದ ಜರುಗಿತು.
ಬೆಳಿಗ್ಗೆಯಿಂದಲೇ ಬನಶಂಕರಿ ದೇವಿಗೆ ಕುಂಭಾಭಿಷೇಕ, ಮಾಲೆ ಉತ್ಸವ ನಡೆದವು. ನಂತರ ಕಳಸೋತ್ಸವವು ವಿವಿಧ ಡೊಳ್ಳುಗಳ ನಿನಾದದೊಂದಿಗೆ ಜರುಗಿತು.
ಸಂಜೆ ದೇವಿಯ ರಥೋತ್ಸವ ಸಹಸ್ರಾರು ಭಕ್ತರ ಮಧ್ಯೆ ಜರುಗಿತು. ರಥೋತ್ಸವ ನಡೆದಾಗ ಭಕ್ತರ ಘೋಷಣೆಗಳು, ಸಂಭ್ರಮ ಮುಗಿಲು ಮುಟ್ಟಿತ್ತು. ಎಲ್ಲೆಡೆಯೂ ಉತ್ತತ್ತಿ, ಬಾಳೆಹಣ್ಣು ತೂರುವ ದೃಶ್ಯ ಕಂಡು ಬಂತು. ಚಿಕ್ಕಮಕ್ಕಳು ಕೂಡಾ ಉತ್ಸಾಹದಿಂದ ಭಾಗವಹಿಸಿದ್ದರು. ರಥೋತ್ಸವ ವೀಕ್ಷಿಸಲು ಜನ ಮುಖ್ಯ ರಸ್ತೆ,ಮಾಳಿಗೆ ಕಟ್ಟೆ ಮೇಲೆ ಜನ ಸೇರಿದ್ದರು. ಮಹಿಳೆಯರು, ಮಕ್ಕಳು, ವಯೋವೃದ್ಧರು, ಯುವಕರು ಕೂಡಾ ಉತ್ಸಾಹದಿಂದ ಭಾಗವಹಿಸಿದ್ದರು.
ರಥವನ್ನು ವಿಶೇಷವಾಗಿ ಶೃಂಗಾರಗೊಳಿಸಲಾಗಿತ್ತು. ಇದಕ್ಕೂ ಮೊದಲು ರಥದ ಭವ್ಯವಾದ ಕಳಸವನ್ನು ವಾದ್ಯ ಮೇಳದೊಂದಿಗೆ ಭಕ್ತಾದಿಗಳ ಮಂತ್ರ ಘೋಷಣೆಗಳೊಂದಿಗೆ ಮೆರವಣಿಗೆ ಮೂಲಕ ತರಲಾಯಿತು. ಮಾರ್ಗ ಮಧ್ಯೆ ಅನೇಕ ಕಡೆ ಮಹಿಳೆಯರಾದಿಯಾಗಿ ಎಲ್ಲರೂ ಪೂಜೆ ಸಲ್ಲಿಸಿ, ಹಾರ ಅರ್ಪಿಸಿದರು. ನಂತರ ಕಳಸವನ್ನು ರಥದ ಪರಿಕರ ಬಳಿ ತರಲಾಯಿತು. ಕಳಸಾರೋಹಣದೊಂದಿಗೆ ರಥೋತ್ಸವ ಪ್ರಾರಂಭವಾಯಿತು. ರಥ ಹಿಂದೆ ದೇವಿಯ ಪಲ್ಲಕ್ಕಿ ಉತ್ಸವವೂ ನಡೆಯಿತು.