ಗಯಾ (ಪಿಟಿಐ): ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗೆ ಚುನಾವಣಾ ಪ್ರಚಾರ ಸಭೆಯ ವೇದಿಕೆ ಹಂಚಿಕೊಂಡಿದ್ದ ಕೊಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಗಯಾ ನಗರಸಭೆಯ ಮಾಜಿ ಸದಸ್ಯ ಜಾವೇದ್ ಖಾನ್ ಬಂಧಿತ ವ್ಯಕ್ತಿ. ಖಾನ್ ವಿರುದ್ಧ ಗಯಾ ನ್ಯಾಯಾಲಯ ಡಿಸೆಂಬರ್ನಲ್ಲಿ ಬಂಧನ ವಾರಂಟ್ ಹೊರಡಿಸಿತ್ತು.
ಶುಕ್ರವಾರ ಇಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗೆ ಖಾನ್ ಕಾಣಿಸಿಕೊಂಡಿದ್ದರು. ಇದನ್ನು ಗಮನಿಸಿದ ಜನ ಕೂಗಾಡಿ ವಿರೋಧ ವ್ಯಕ್ತಪಡಿಸಿದರು.
ಈ ವೇಳೆ ಪೊಲೀಸರು ಸ್ಥಳಕ್ಕೆ ಬಂದು ಖಾನ್ ಅವರನ್ನು ವಶಕ್ಕೆ ಪಡೆದರು. ಈ ಘಟನೆಯಿಂದ ನಿತೀಶ್ ಕುಮಾರ್ ತೀವ್ರ ಮುಜುಗರ ಅನುಭವಿಸುವಂತಾಯಿತು. ವಿರೋಧ ಪಕ್ಷಗಳು ಈ ಘಟನೆಗೆ ಸಂಬಂಧಿಸಿ ಆಡಳಿತಾರೂಢ ಜೆಡಿಯು ಸರ್ಕಾರದ ವಿರುದ್ಧ ಹರಿಹಾಯ್ದಿವೆ. ಇಲ್ಲಿನ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಕೆ.ಕೆ. ಸಿಂಗ್ ಅವರು ಖಾನ್ ಅವರನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದರು.