ಹಾಸನ: ನ್ಯಾಯಾಲಯದ ಆದೇಶದ ಮೇರೆಗೆ ಹೇಮಾವತಿ ಜಲಾಶಯದಿಂದ ಒಂದು ಟಿಎಂಸಿ ನೀರನ್ನು ಕೆಆರ್ಎಸ್ಗೆ ಬಿಡುಗಡೆ ಮಾಡಲಾಗುತ್ತಿದೆ. ಸೋಮವಾರದ ವರೆಗೂ ಪ್ರತಿದಿನ ತಲಾ 6600 ಕ್ಯೂಸೆಕ್ ನೀಡನ್ನು ಬಿಡಲಾಗುವುದು ಎಂದು ಹೇಮಾವತಿ ಡ್ಯಾಂ ವಿಭಾಗದ ಎಂಜಿನಿಯರ್ ವೆಂಕಟೇಶ್ ತಿಳಿಸಿದ್ದಾರೆ.
ಶನಿವಾರ ರಾತ್ರಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಈ ವಿವರ ನೀಡಿದರು.
ಯಗಚಿಯಿಂದ ಬಿಟ್ಟಿರುವ ಮೂರು ಸಾವಿರ ಕ್ಯೂಸೆಕ್ ಸೇರಿದಂತೆ ಹೇಮಾವತಿಯ ಒಳಹರಿವು 6053 ಕ್ಯೂಸೆಕ್ ಇದ್ದು, 6600 ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗುತ್ತದೆ. ಸೋಮವಾರ ಸುಪ್ರೀಂ ಕೋರ್ಟ್ ಮುಂದೆ ರಾಜ್ಯದ ಮರುಪರಿಶೀಲನಾ ಅರ್ಜಿ ಆಬರಲಿದ್ದು ಅಲ್ಲಿ ನಮಗೆ ಸೂಕ್ತವಾದ ವರದಿ ಬರಬಹುದೆಂಬ ಹಿನ್ನೆಲೆಯಲ್ಲಿ ನೀರು ಬಿಡುತ್ತಿದ್ದೇವೆ ಎಂದು ಅವರು ತಿಳಿಸಿದರು.
ಸಾಮಾನ್ಯವಾಗಿ ಜಿಲ್ಲೆಯಲ್ಲಿ ಅಕ್ಟೋಬರ್ನಿಂದ ಡಿಸೆಂಬರ್ ಒಳಗಿನ ಅವಧಿಯಲ್ಲಿ ಮಳೆಯಾಗಿ ಜಲಾಶಯಕ್ಕೆ ಹತ್ತು ಟಿಎಂಸಿ ನೀರು ಬರುತ್ತದೆ. ಈ ವರ್ಷ ಮಳೆ ಸ್ವಲ್ಪ ಕಡಿಮೆಯಾದರೂ ಎಂಟು ಟಿಎಂಸಿ ನೀರಾದರೂ ಬರಬಹುದೆಂಬ ನಿರೀಕ್ಷೆ ಇದೆ. ಮಳೆಯಾಗದಿದ್ದರೆ ಬೆಳೆಗಳಿಗೆ ಸ್ವಲ್ಪ ಕಷ್ಟವಾಗಬಹುದು. ಆದರೆ ಮುಂದಿನ ಆದೇಶ ಬರುವವರೆಗೆ ನೀರನ್ನು ಬಿಡುವುದು ಅನಿವಾರ್ಯ. ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಗೋಪಾಲಕೃಷ್ಣ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಭಾಕರ್ ಹಾಗೂ ಯಗಚಿ ಜಲಾಶಯದ ಎಂಜಿನಿಯರ್ ಮಲ್ಲೇಶಗೌಡ ಇದ್ದರು.