ಮಡಬೂರು (ಎನ್.ಆರ್.ಪುರ): ಎಲ್ಲರ ಮನೆಯಲ್ಲಿ, ನಿತ್ಯಜೀವನದಲ್ಲಿ ಕನ್ನಡ ಬಳಸುತ್ತಾ ಹೋದರೆ ಭಾಷೆ ಬೆಳೆಯುತ್ತಾ ಹೋಗುತ್ತದೆ ಎಂದು ಆದಿಚುಂಚನಗಿರಿ ಶಿವಮೊಗ್ಗ ಶಾಖಾ ಮಠದ ಪ್ರಸನ್ನನಾಥ ಸ್ವಾಮೀಜಿ ಅವರು ಹೇಳಿದರು.ಗ್ರಾಮದಲ್ಲಿ ಶನಿವಾರ 5ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿ, ಕನ್ನಡದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು.ರಾಜಕಾರಣಿ, ಅಧಿಕಾರಿಗಳ ಮಕ್ಕಳೂ ಕನ್ನಡ ಶಾಲೆಗೆ ಬರುವಂತಾದರೆ ಕನ್ನಡ ಉಳಿದು-ಬೆಳೆಯುತ್ತದೆ ಎಂದರು.
ಭಾಷೆ ನಾಶವಾದರೆ ಒಂದು ಜನಾಂಗ, ಸಂಸ್ಕೃತಿಯೇ ನಾಶವಾಗುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಬೆಂಗಳೂರಿನ ಎಚ್.ಕೆ.ಮಳಲಿ ಮನವಿ ಮಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ದುರ್ಗಾಂಬ ದೇವಸ್ಥಾನ ಸಮಿತಿ ಅಧ್ಯಕ್ಷ ಡಿ.ಸಿ.ದಿವಾಕರ್, ಗ್ರಾಮೀಣ ಪ್ರದೇಶದಲ್ಲಷ್ಟೇ ಕನ್ನಡ ಉಳಿದಿದೆ. ಕನ್ನಡವನ್ನು ಕಡ್ಡಾಯ ಭಾಷೆಯಾಗಿಸುವ ನಿರ್ಣಯ ಕೈಗೊಂಡರೆ ಮಾತ್ರ ಉಳಿಯಲು ಸಾಧ್ಯ ಎಂದರು.
ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕ ಅಧ್ಯಕ್ಷ ಪಿ.ಕೆ.ಬಸವರಾಜಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಲೇಖಕ ಡಾ. ಎಚ್.ಆರ್.ಕೃಷ್ಣಯ್ಯಗೌಡ ಸಮ್ಮೇಳನಾಧ್ಯಕ್ಷರಾಗಿದ್ದರು. ನಿಕಟಪೂರ್ವ ಅಧ್ಯಕ್ಷ ಟಿ.ಆರ್. ನಾಗಪ್ಪಗೌಡ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಅಧ್ಯಕ್ಷ ಚಂದ್ರಪ್ಪ, ತಾಲ್ಲೂಕು ಘಟಕ ನಿರ್ದೇಶಕ ಶಾಂತಕುಮಾರ್ ಮತ್ತಿತರರಿದ್ದರು.