ಚೆನ್ನೈ: ವಿವಾದಾತ್ಮಕ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿಯನ್ನು ಮಧುರೈನ ಪುರಾತನ ಶೈವ ಸಿದ್ಧಾಂತದ ಮಠ `ಮಧುರೈ ಅಧೀನಂ~ನ ಪೀಠಾಧಿಪತಿ ಸ್ಥಾನದಿಂದ ಮಠದ ಹಿರಿಯ ಸ್ವಾಮೀಜಿ ಕಿತ್ತುಹಾಕಿದ್ದು ಇದನ್ನು ಸ್ವಾಗತಿಸಿದ ವಿವಿಧ ಹಿಂದೂಪರ ಸಂಘಟನೆಗಳು ತಮಿಳುನಾಡಿನ ಎಲ್ಲೆಡೆ ಶನಿವಾರ ವಿಜಯೋತ್ಸವ ಆಚರಿಸಿವೆ.
ವಿವಿಧ ಆರೋಪಗಳಿಂದ ವಿವಾದಕ್ಕೆ ಸಿಲುಕಿದ್ದ ಬೆಂಗಳೂರು ಬಳಿಯ ಬಿಡದಿಯಲ್ಲೂ ಆಶ್ರಮ ಹೊಂದಿರುವ ನಿತ್ಯಾನಂದ ಅವರನ್ನು ಕಳೆದ ಏಪ್ರಿಲ್ ತಿಂಗಳಿನಲ್ಲಿ `ಮಧುರೈ ಅಧೀನಂ~ನ ಮುಂದಿನ ಪೀಠಾಧಿಪತಿಯನ್ನಾಗಿ ಆಯ್ಕೆ ಮಾಡಲಾಗಿತ್ತು. ಇದು ಹಲವು ಹಿಂದೂ ಸಂಘಟನೆಗಳ ವಿರೋಧಕ್ಕೆ ಕಾರಣವಾಗಿತ್ತು.
ಮಠದ ಹಿರಿಯ ಸ್ವಾಮೀಜಿ ಅರುಣಗಿರಿನಾಥ ದೇಶಿಕಾರ್ ಅವರು ಶುಕ್ರವಾರ ರಾತ್ರಿ ನಿತ್ಯಾನಂದ ಉಚ್ಛಾಟನೆ ನಿರ್ಧಾರ ಕೈಗೊಂಡಿದ್ದು, ಇದನ್ನು ಸ್ವಾಗತಿಸಿ ಭಕ್ತರು ಮಠದ ಮುಂದೆ 108 ತೆಂಗಿನ ಕಾಯಿಗಳನ್ನು ಒಡೆದರು.
ಕುಂಭಕೋಣಂ, ಕೊಯಮತ್ತೂರು ಹಾಗೂ ನಿತ್ಯಾನಂದನ ಮೂಲ ಸ್ಥಳವಾದ ತಿರುವಣ್ಣಾಮಲೈನಲ್ಲೂ ಹಿಂದೂ ಮಕ್ಕಳ ಕಚ್ಚಿ, ಹಿಂದೂ ಮುನ್ನಾನಿ ಮತ್ತಿತರ ಸಂಘಟನೆಗಳ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.