ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮಗೂ ಇದ್ದಾರೆ ಆಪ್ತರು

Last Updated 21 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

`ಚಿಕ್ಕ ಸಂಸಾರ ಚೊಕ್ಕ ಸಂಸಾರ~ ಎಂಬ ನಾಣ್ನುಡಿಯನ್ನು ಪಾಲಿಸಲು ಹೋಗಿ, ಮನೆ ಎಂದರೆ ಬರೀ `ಗಂಡ- ಹೆಂಡತಿ- ಮಗು~ ಅಷ್ಟೇ ಎಂದುಕೊಂಡಿರುವ ಈಗಿನ ಬಹುತೇಕ ಕುಟುಂಬಗಳು ಏನಾಗುತ್ತಿವೆ? ಕಷ್ಟ ಸುಖದಲ್ಲಿ ಭಾಗಿಯಾಗಲು ಆಪ್ತೇಷ್ಟರೇ ಇಲ್ಲದಂತಾಗಿ ಮಾನಸಿಕ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತಿವೆ.

ಕಷ್ಟವನ್ನಾಗಲೀ ಸಾಧನೆಗಳನ್ನಾಗಲೀ ಆತ್ಮೀಯರೊಡನೆ ಹಂಚಿಕೊಂಡಾಗ ಮನಸ್ಸು ಹಗುರಾಗುತ್ತದೆ. ಸಾಧನೆಯ ಬಗ್ಗೆ ಹೇಳಿಕೊಳ್ಳುವುದು ಸಾರ್ಥಕ್ಯ ಭಾವವನ್ನು ತಂದುಕೊಟ್ಟರೆ, ಕಷ್ಟಗಳನ್ನು ಹೇಳಿಕೊಂಡಾಗ ಅದನ್ನು ಎದುರಿಸಲು ಸಹಾಯ- ದಾರಿ ಎರಡೂ ಸಿಗುವ ಸಾಧ್ಯತೆ ಇರುತ್ತದೆ.

ಆದರೆ ಈಗಿನ ಒಂಟಿ ಕುಟುಂಬಗಳು ಒಟ್ಟು ಕುಟುಂಬದ ಕಲ್ಪನೆಯೇ ಇಲ್ಲದಂತೆ ಮಾಡಿವೆ. ಹೀಗಾಗಿ ಹಂಚಿಕೊಳ್ಳುವವರಿಲ್ಲದೇ ಅದುಮಿಟ್ಟುಕೊಂಡ ಭಾವನೆಗಳು ಮನದಲ್ಲೇ ಕುಳಿತು, ಆಂತರಿಕ ದಾಳಿ ಮಾಡಿ ದೈಹಿಕ ಬೇನೆಗಳ ರೂಪದಲ್ಲಿ ಹೊರಹೊಮ್ಮಲು ಕಾರಣವಾಗಿವೆ.
 
ಇವೇ `ಮನೋದೈಹಿಕ ಬೇನೆಗಳು~. ಇವು ಮನಸ್ಸಿನ ಅಸ್ವಾಸ್ಥ್ಯದಿಂದ  ಬಂದ ತೊಂದರೆಗಳೇ ಹೊರತು ಬೇರೇನೂ ಅಲ್ಲ. ಹೀಗಾಗಿ ವೈದ್ಯರು ಪರೀಕ್ಷಿಸಿ ಬೇಕಾದಂಥ ಎಲ್ಲ ತಪಾಸಣೆ, ಪರೀಕ್ಷೆಗಳನ್ನು ಮಾಡಿದರೂ ಏನೂ ಗೋಚರಿಸುತ್ತಿಲ್ಲ, ಎಲ್ಲವೂ ಸರಿಯಾಗಿದೆ, ಆದರೂ ಈ ಕಾಯಿಲೆಗೆ ಕಾರಣವೇ ತಿಳಿಯುತ್ತಿಲ್ಲವಲ್ಲ ಎಂಬ ಗೊಂದಲ ಉಂಟಾಗಬಹುದು. ಆದರೆ ಇದು ಮನೋದೈಹಿಕ ಬೇನೆ ಎಂಬುದನ್ನು ಕಂಡುಕೊಂಡಾಗ ಚಿಕಿತ್ಸೆ ಸುಲಭವಾಗುತ್ತದೆ. ಈ ಕಾರ್ಯದಲ್ಲಿ ಆಪ್ತ ಸಮಾಲೋಚನೆ ಸೂಕ್ತ ಹಾಗೂ ಬಹಳ ಪರಿಣಾಮಕಾರಿ.

ಒಂದೆರಡು ದಶಕಗಳ ಹಿಂದಿನವರೆಗೂ ಒಟ್ಟು ಕುಟುಂಬ ವ್ಯವಸ್ಥೆ ಇದ್ದ ನಮ್ಮ ದೇಶದಲ್ಲಿ ಆಪ್ತ ಸಮಾಲೋಚನೆಯ ಅಗತ್ಯ ಇರಲಿಲ್ಲ. ಆದರೆ ಆಪ್ತ ಸಮಾಲೋಚನೆ ಇಂದಿನ ಅಗತ್ಯವೂ ಹೌದು, ವೃತ್ತಿಯೂ ಹೌದು. ಇದನ್ನೇ ಇಂಗ್ಲಿಷ್‌ನಲ್ಲಿ ್ಚಟ್ಠ್ಞಛ್ಝ್ಝಿಜ್ಞಿಜ ಎಂದು ಕರೆಯಲಾಗುತ್ತದೆ. ಇದು ಮನೋವೈಜ್ಞಾನಿಕ ಚಿಕಿತ್ಸೆಯನ್ನು ಒಳಗೊಂಡಿದೆ. ಅದಕ್ಕಾಗಿಯೇ `ಇದು ಯಾರಿಗೆ ಅವಶ್ಯ, ಹೇಗೆ ಮಾಡಬೇಕು~ ಎಂಬುದಕ್ಕೆ ಈಗ ಸೂಕ್ತ ತರಬೇತಿ ಸಹ ನೀಡಲಾಗುತ್ತದೆ.

ಈ ಮನೋವೈಜ್ಞಾನಿಕ ಆಪ್ತ ಸಮಾಲೋಚನೆಯ ಮೂಲ ಪುರುಷ ನಮ್ಮ `ಶ್ರೀಕೃಷ್ಣ~. ಮಹಾಭಾರತ ಓದಿದ ಎಲ್ಲರಿಗೂ ಇದು ವೇದ್ಯ. `ಶ್ರೀಮದ್ ಭಗವದ್ಗೀತೆ~ ಎಂಬುದು ಅರ್ಜುನನಿಗೆ ಕೃಷ್ಣ ಮಾಡಿದ `ಆಪ್ತ ಸಮಾಲೋಚನೆ ಅಥವಾ ಮನೋವೈಜ್ಞಾನಿಕ ಚಿಕಿತ್ಸೆ~ ಎಂದರೆ ಉತ್ಪ್ರೇಕ್ಷೆ ಏನಲ್ಲ. ಇದು ಬರೀ ಅರ್ಜುನನಿಗೆ ಮಾತ್ರವಲ್ಲ, ಇಡೀ ಮಾನವಕುಲಕ್ಕೇ ಮಾಡಿದ ಚಿಕಿತ್ಸೆ.

ಆದರೆ ಅದನ್ನು ನಾವು ಮರೆತಿದ್ದೇವಷ್ಟೆ.ಆಪ್ತ ಸಮಾಲೋಚನೆಯಲ್ಲಿ ಮುಖ್ಯವಾಗಿ ನಾವು ಮಾಡಬೇಕಾದದ್ದು, ಒಬ್ಬ ವ್ಯಕ್ತಿಗೆ ಮಾನಸಿಕ ಅಸ್ವಸ್ಥತೆ ಕಾಡುತ್ತಿದೆಯೇ ಅಥವಾ ಅದು ನಿಜವಾಗಿಯೂ ಮಾನಸಿಕ ರೋಗವೇ ಎಂಬ ವಿಶ್ಲೇಷಣೆ. ಮಾನಸಿಕ ಅಸ್ವಸ್ಥತೆಗೆ ಆಪ್ತ ಸಮಾಲೋಚನೆಯ ಅಗತ್ಯವಿದೆ. ಆದರೆ ಮಾನಸಿಕ ರೋಗಕ್ಕೆ ಮನೋವೈದ್ಯರ ಚಿಕಿತ್ಸೆ ಬೇಕಾಗುತ್ತದೆ. ಚಿಕಿತ್ಸೆಯ ನಂತರ ಅವರಿಗೆ, ಅವರ ಕುಟುಂಬಕ್ಕೆ ಸಮಾಲೋಚನೆ ಬೇಕಾಗಬಹುದು.

ಆಪ್ತ ಸಮಾಲೋಚನೆಯಲ್ಲಿ ಚಿಕಿತ್ಸೆ ಏನೂ ಇರುವುದಿಲ್ಲ. ಇಲ್ಲಿ ಆಪ್ತ ಸಮಾಲೋಚಕರು (ಕೌನ್ಸೆಲರ್) ಬಹಳ ಸಹನೆಯಿಂದ, ತೆರೆದ ಮನಸ್ಸಿನಿಂದ, ಸಹೃದಯತೆಯಿಂದ, ಎಚ್ಚರಿಕೆಯಿಂದ ಒಬ್ಬ ವ್ಯಕ್ತಿಯ ಸಮಸ್ಯೆ ಕೇಳಿಸಿಕೊಳ್ಳಬೇಕು. ಇದು ಬಹಳ ಮುಖ್ಯ. ಇಲ್ಲಿ ಸಮಸ್ಯೆಯನ್ನು ಬೇರೆ ದೃಷ್ಟಿಕೋನದಿಂದ ನೋಡಿದಾಗ ಪರಿಹಾರದ ದಾರಿ ಸುಗಮವಾಗುತ್ತದೆ.
 
ಒಂದು ಸಮಸ್ಯೆಗೆ ನಾನಾ ಮುಖಗಳು ಇರುತ್ತವೆ. ಸಮಸ್ಯೆಯನ್ನು ತೆರೆದಿಡುವಾಗಲೇ ಎಷ್ಟೋ ಸಲ ವ್ಯಕ್ತಿಯ ಮನಸ್ಸು ತಿಳಿಯಾಗ ತೊಡಗುತ್ತದೆ. ನಾವು ಉದ್ವೇಗ, ಕೋಪ, ದುಡುಕಿನಿಂದಲೇ ಸಮಸ್ಯೆ ತಂದುಕೊಳ್ಳುತ್ತೇವೆ. ಮನಸ್ಸು ಶಾಂತವಾದಾಗ, ಸಮಸ್ಯೆಯನ್ನು ಹಂಚಿಕೊಂಡಾಗ ಪರಿಹಾರ ಸುಲಭವಾಗುತ್ತದೆ. ಎಷ್ಟೋ ಸಲ ಒಂದು ಸಣ್ಣ ಸಲಹೆ, ಸೂಚನೆ ನಮ್ಮ ಸಮಸ್ಯೆಗೆ ಪರಿಹಾರ ಸೂಚಿಸುತ್ತದೆ.

ಆಪ್ತ ಸಮಾಲೋಚನೆಗೆ ಬರುವ ಬಹುತೇಕ ವ್ಯಕ್ತಿಗಳಿಗೆ ತಮ್ಮದೇ ಸರಿ, ತಾವು ಮಾಡಿದ್ದರಲ್ಲಿ ತಪ್ಪೇನಿಲ್ಲ ಎಂಬ ಭಾವನೆ ಇರುತ್ತದೆ. ಆದ್ದರಿಂದ ಸಮಾಲೋಚಕರು ಯಾವ ಪೂರ್ವಗ್ರಹವಿಲ್ಲದೇ ಇರಬೇಕು ಹಾಗೂ ವ್ಯಕ್ತಿಗತ ಹೇಳಿಕೆ, ಅಭಿಪ್ರಾಯಗಳನ್ನು ಕೊಡಬಾರದು.

ಆಪ್ತ ಸಮಾಲೋಚಕರು ಔಷಧಿಗಳನ್ನಾಗಲೀ, ಸಮಸ್ಯೆಗೆ ಪರಿಹಾರವನ್ನಾಗಲೀ ಕೊಡುವವರಲ್ಲ. ಒಬ್ಬ ಒಳ್ಳೆಯ ಆಪ್ತ ಸಮಾಲೋಚಕ ಒಂದು ಕನ್ನಡಿ ಇದ್ದಂತೆ. ಸಾಧಾರಣ ಕನ್ನಡಿಯಲ್ಲಿ ನಮ್ಮ ಹೊರಗಿನ ವ್ಯಕ್ತಿತ್ವವನ್ನು ಕಾಣುತ್ತೇವೆ. ಆದರೆ ಇಲ್ಲಿ ನಮ್ಮ ಮನಸ್ಸಿನ ಕನ್ನಡಿಯಲ್ಲಿ ನಮ್ಮ ಭಾವಗಳನ್ನು ಕಾಣುತ್ತೇವೆ.
 
ಆಪ್ತ ಸಮಾಲೋಚಕರು ಯಾವುದೇ ಸರಿ- ತಪ್ಪಿನ ತೀರ್ಪುಗಾರರಲ್ಲ. ನಾವು ಭಾವೋದ್ವೇಗದಿಂದ ಸೃಷ್ಟಿಸಿದ ಸಮಸ್ಯೆಗಳನ್ನು ಶಾಂತವಾಗಿ ಬಿಚ್ಚು ಮನಸ್ಸಿನಿಂದ ವಿಶ್ಲೇಷಿಸಲು ಸಹಾಯ ಮಾಡುತ್ತಾರೆ. ಇದರಿಂದ ವ್ಯಕ್ತಿಯೇ ಸಮಸ್ಯೆಯನ್ನು ಬೇರೆ ಬೇರೆ ದೃಷ್ಟಿಕೋನಗಳಿಂದ ನೋಡಿ ಸೂಕ್ತ ಪರಿಹಾರ ಕಂಡುಕೊಳ್ಳಲು ಸಹಾಯವಾಗುತ್ತದೆ.

ಹಾಗೆ ನೋಡಿದರೆ ಪ್ರತಿಯೊಬ್ಬರ ಜೀವನದ್ಲ್ಲಲೂ ಒಂದಲ್ಲ ಒಂದು ಸಂದರ್ಭದಲ್ಲಿ ಆಪ್ತ ಸಮಾಲೋಚನೆಯ ಅಗತ್ಯ ಇರುತ್ತದೆ. ಹಣಕಾಸಿನ ಮುಗ್ಗಟ್ಟು, ಅನಾರೋಗ್ಯ, ವೈವಾಹಿಕ ಜೀವನದಲ್ಲಿ ವಿರಸ, ಸಾಮರಸ್ಯ ಇ್ಲ್ಲಲದಿರುವುದು, ಕಾನೂನು ಸಮಸ್ಯೆ ಇತ್ಯಾದಿಗಳೆಲ್ಲ ನಮ್ಮನ್ನು ಕಾಡುತ್ತವೆ.

ಇದಕ್ಕೆ ಪರಿಹಾರ ಕಾಣದಾದಾಗ ಮಾನಸಿಕ ಅಸ್ವಾಸ್ಥ್ಯ ಬೆಳೆಯುತ್ತದೆ. ಇಂಥ ಸಮಯದಲ್ಲಿ ದೈಹಿಕ ಕಾಯಿಲೆಗಳಿಗೆ ಪರಿಹಾರ ಕಾಣಲು ವೈದ್ಯರಲ್ಲಿ ಹೋಗುವಂತೆ ಆಪ್ತ ಸಮಾಲೋಚಕರ ಸಲಹೆ ಪಡೆಯುವುದು ಅತ್ಯಂತ ಸೂಕ್ತ. ಈ ಹಂತದಲ್ಲಿ ಸಮಸ್ಯೆ ಪರಿಹಾರ ಕಾಣದಿದ್ದವರು ಮಾನಸಿಕ ರೋಗಿಯಾಗುವ ಸಾಧ್ಯತೆ ಇರುತ್ತದೆ.

ಹೀಗಾಗಿ ಮಾನಸಿಕ ಅಸ್ವಾಸ್ಥಕ್ಕೂ, ಮಾನಸಿಕ ರೋಗಕ್ಕೂ ಇರುವ ವ್ಯತ್ಯಾಸ ಬಹಳ ಸೂಕ್ಷ್ಮ.ಈ 21ನೇ ಶತಮಾನದಲ್ಲಿ ಕೂಡ ಮಾನಸಿಕ ರೋಗಿಗಷ್ಟೇ (ಹುಚ್ಚ) ಮನೋವೈಜ್ಞಾನಿಕ ಅಥವಾ ಮಾನಸಿಕ ಚಿಕಿತ್ಸೆ ಬೇಕೆಂಬ ಅಭಿಪ್ರಾಯವಿದೆ. ಇಂತಹ ಸಲಹೆ, ಚಿಕಿತ್ಸೆ ಬಯಸುವವರೆಲ್ಲ ಮಾನಸಿಕ ರೋಗಿಗಳೆಂಬ ಗ್ರಹಿಕೆಯಿದೆ. ಈ ಕಲ್ಪನೆ ತಪ್ಪು. ಮಾನಸಿಕ ಅಸ್ವಸ್ಥತೆಯ ಹಂತದಲ್ಲೇ ಸಮಸ್ಯೆ ಪರಿಹಾರವಾದರೆ ಆ ವ್ಯಕ್ತಿಗೆ, ಅವರ ಸಂಸಾರಕ್ಕೆ, ಸಮಾಜಕ್ಕೆ ದೊಡ್ಡ ಉಪಕಾರವಾಗುತ್ತದೆ.

ಅಂಕಿಸಂಖ್ಯೆಗಳ ಪ್ರಕಾರ ಇಂದು ನಮ್ಮ ದೇಶದ್ಲ್ಲಲಿ ಶೇ 40ರಷ್ಟು ಜನ ಒಂದಿಲ್ಲೊಂದು ಬಗೆಯ ಮಾನಸಿಕ ಅಸ್ವಾಸ್ಥ್ಯದಿಂದ ಬಳಲುತ್ತಿದ್ದಾರೆ. ಪಾಶ್ಚಾತ್ಯ ದೇಶಗಳಿಗೆ ಹೋಲಿಸಿದರೆ ಈ ಪ್ರಮಾಣ ಕಡಿಮೆ ಇರಬಹುದು. ಆದರೆ ನಮ್ಮ ದೇಶದ ಮಟ್ಟಿಗೆ ಈ ಸಂಖ್ಯೆ ಗಾಬರಿ ಹುಟ್ಟಿಸುವಂತಿದೆ. ಇದನ್ನು ನಿಯಂತ್ರಿಸುವಲ್ಲಿ  ಆಪ್ತ ಸಮಾಲೋಚನೆ ಬಹಳ ಮುಖ್ಯ ಪಾತ್ರ ವಹಿಸುತ್ತದೆ.

ಒಂದು ಸಣ್ಣ ತಪ್ಪು ತಿಳಿವಳಿಕೆ ಅಥವಾ ವ್ಯಕ್ತಿಗತ ಅಹಂಕಾರದಿಂದ ಸಾಂಸಾರಿಕ ಜೀವನ ಶಿಥಿಲವಾಗುತ್ತಿದೆ, ಸಮಾಜದ ಆರೋಗ್ಯ ಕೆಡುತ್ತಿದೆ. ಸಮಾಜ ಆರೋಗ್ಯಪೂರ್ಣ ಆಗಿರಲು ಬೇಕಾಗಿರುವುದು ಪರಸ್ಪರ ತಿಳಿವಳಿಕೆ, ಅನ್ಯೋನ್ಯತೆಯಿಂದ ಇರುವ ಕುಟುಂಬಗಳು. ಈ ದಿಸೆಯಲ್ಲಿ ಆಪ್ತ ಸಮಾಲೋಚನೆ ಇಂದಿನ ಬಹು ಮುಖ್ಯ ಅಗತ್ಯವಾಗಿದೆ. ಹೀಗಾಗಿ ಆಪ್ತ ಸಮಾಲೋಚಕರಿಗೂ    ಬೇಡಿಕೆ ಹೆಚ್ಚುತ್ತಿದೆ.

ವ್ಯಾಪಾರಿ ಕೇಂದ್ರಗಳಲ್ಲ...
ಆಪ್ತ ಸಮಾಲೋಚನೆ ಕೇಂದ್ರಗಳು ಮಾನವೀಯ ದೃಷ್ಟಿಯಿಂದ ಕೆಲಸ ಮಾಡಬೇಕೇ ಹೊರತು ವ್ಯಾಪಾರಿ ಕೇಂದ್ರಗಳಂತಲ್ಲ. ಇದರಲ್ಲಿ ಸಹ ಬೇರೆ ಬೇರೆ ಬಗೆಯ ಸಮಸ್ಯೆಗಳಿಗೆ ಬೇರೆ ಬೇರೆ ವಿಭಾಗಗಳಿವೆ.

ಸಾಮಾನ್ಯ ಆಪ್ತ ಸಮಾಲೋಚನೆ (ಜನರಲ್), ಮಕ್ಕಳ ಆಪ್ತ ಸಮಾಲೋಚನೆ, ವಿವಾಹಿತರು, ಹದಿವಯಸ್ಸಿವರು, ವಿವಾಹ ವಿಚ್ಛೇದಿತರು, ವಿದ್ಯಾರ್ಥಿಗಳು, ಅನಾರೋಗ್ಯ ಪೀಡಿತರು, ಭೀಕರ ಕಾಯಿಲೆಗಳಿಂದ ಪಾರಾದವರು, ವೃದ್ಧಾಪ್ಯ ಹೀಗೆ ನಾನಾ ಸಮಸ್ಯೆಗಳಿಗೆ ನಾನಾ ಥರದ ಸಮಾಲೋಚನೆ ಲಭ್ಯವಿದೆ. ಸಾಮಾನ್ಯ ಸಲಹೆಯಲ್ಲಿ ಲಭ್ಯವಾಗುವ ಮಾಹಿತಿಯ ಮೇಲೆ ಅವರನ್ನು ಆಯಾಯ ವಿಭಾಗಗಳಿಗೆ ನಿರ್ದೇಶಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT