ಗರ್ಭಕೊರಳಿನ ಕ್ಯಾನ್ಸರ್ನಿಂದ ನಿಮ್ಮ ದೇವತೆಯನ್ನು ಸಂರಕ್ಷಿಸಿ ಎಂದು ಕುನಾಲ್ ಕಪೂರ್ ಕರೆ ನೀಡುತ್ತಿದ್ದಾರೆ.
`ಭಾರತದಲ್ಲಿ ಪ್ರತಿ ಏಳು ನಿಮಿಷಕ್ಕೆ ಒಬ್ಬ ಮಹಿಳೆ ಗರ್ಭಕೊರಳಿನ ಕ್ಯಾನ್ಸರ್ಗೆ ಬಲಿಯಾಗುತ್ತಿದ್ದಾಳೆ. ಆಕೆ ನಿಮ್ಮ ಅಮ್ಮನಾಗಿರಬಹುದು. ಅಕ್ಕರೆಯ ಸಹೋದರಿಯಾಗಿರಬಹುದು ಅಥವಾ ಸಂಗಾತಿಯಾಗಿರಬಹುದು. ನಿಮ್ಮ ಬದುಕನ್ನು ಬೆಳಗುವ ಆ ದೇವತೆಯನ್ನು ಈ ಕ್ಯಾನ್ಸರ್ನಿಂದ ರಕ್ಷಿಸಿ~ ಎಂದು ಕುನಾಲ್ ಕಪೂರ್ ಹೇಳುತ್ತಿದ್ದಾರೆ.
ಗರ್ಭಕೊರಳಿನ ಕ್ಯಾನ್ಸರ್ ವಿರುದ್ಧದ ಪ್ರಚಾರದಲ್ಲಿ ಭಾಗಿಯಾಗಿರುವ ಕುನಾಲ್ ಕಪೂರ್ಗೆ ಈ ಕೆಲಸ ಸಂತಸ ತಂದಿದೆಯಂತೆ.
`ತಾರೆಗಳು ಕಾರು ಮಾರುತ್ತಾರೆ, ಕೋಲಾ ಮಾರುತ್ತಾರೆ. ಆದರೆ ಇಂಥ ಮಹತ್ವದ ವಿಷಯ ಬಂದಾಗ ಹಿಂಜರಿಯಬಾರದು. ಇದು ಬದುಕಿನ ವಿಷಯ~ ಎಂಬುದು ಅವರ ಕಿವಿಮಾತು.
`ರಂಗ್ ದೇ ಬಸಂತಿ~ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ್ದ ಗುಂಗುರು ಕೂದಲಿನ ಕುನಾಲ್ `ಡಾನ್ 2~ ಚಿತ್ರದಲ್ಲೂ ಮಿಂಚಿದ್ದರು.
ಭಾರತದಲ್ಲಿ ತಾರೆಯರ ಮಾತನ್ನು ನಂಬುತ್ತಾರೆ. ಆರಾಧಿಸುತ್ತಾರೆ. ಈ ಆರಾಧನೆಯನ್ನು ಜಾಗೃತಿಗಾಗಿ ಬಳಸುವುದು ಅತ್ಯುತ್ತಮ ಮಾರ್ಗವಾಗಿದೆ ಎಂದೂ ಅಭಿಪ್ರಾಯ ಪಟ್ಟಿರುವ ಅವರು, ಎಂಎಸ್ಡಿ ಫಾರ್ಮಾಸ್ಯುಟಿಕಲ್ಸ್ ಹಮ್ಮಿಕೊಂಡಿದ್ದ ಈ ಪ್ರಚಾರ ಆಂದೋಲನದಲ್ಲಿ ಭಾಗವಹಿಸಿದ್ದರು. ಪ್ರಚಾರಕ್ಕಾಗಿ ನವದೆಹಲಿಯಲ್ಲಿ ಫ್ಯಾಶನ್ ಶೋ ಒಂದನ್ನು ಕೂಡ ಆಯೋಜಿಸಲಾಗಿತ್ತು.