ಮುಂಬೈ (ಪಿಟಿಐ): ಡೀಸೆಲ್ ದರ ನಿಯಂತ್ರಣ ಮುಕ್ತಗೊಳಿಸುವ ಮೂಲಕ ಕೇಂದ್ರ ಸರ್ಕಾರ ವಿತ್ತೀಯ ಕೊರತೆ ತಗ್ಗಿಸಲು ಪ್ರಯತ್ನಿಸಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಸಲಹೆ ನೀಡಿದೆ.
ಪ್ರಸಕ್ತ ಹಣಕಾಸು ವರ್ಷದ ಅಂತ್ಯದ ವೇಳೆಗೆ ದೇಶದ ವಿತ್ತೀಯ ಕೊರತೆಯು 160 ಶತಕೋಟಿ ಡಾಲರ್ಗಳಷ್ಟಾಗಲಿದ್ದು, (ರೂ.8,32,000 ಕೋಟಿ) ಇದು ಬಜೆಟ್ನಲ್ಲಿ ಅಂದಾಜಿಸಿರುವ ಆರ್ಥಿಕ ವೃದ್ಧಿ ದರದ (ಜಿಡಿಪಿ) ಶೇ 4.6ಕ್ಕಿಂತಲೂ ಹೆಚ್ಚಿಗೆ ಇರಲಿದೆ.
ಇದರ ಜತೆಗೆ ಆಹಾರ ಸಬ್ಸಿಡಿ ಹೊರೆಯೂ ಏರಿಕೆಯಾಗುವ ಸಾಧ್ಯತೆ ಇದೆ. ಡೀಸೆಲ್ ದರ ನಿಯಂತ್ರಣ ಮುಕ್ತಗೊಳಿಸುವ ಮೂಲಕ ಇವೆರಡು ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಬಹುದು ಎಂದು `ಆರ್ಬಿಐ~, ತನ್ನ ಮೂರನೇಯ ತ್ರೈಮಾಸಿಕ ಹಣಕಾಸು ಪರಾಮರ್ಶೆಯಲ್ಲಿ ಅಭಿಪ್ರಾಯಪಟ್ಟಿದೆ.
ಸದ್ಯಕ್ಕೆ ದೇಶದಲ್ಲಿ ಮಾರಾಟವಾಗುವ ಪೆಟ್ರೋಲಿಯಂ ಉತ್ಪನ್ನಗಳ ದರಗಳು ಅಂತರರಾಷ್ಟ್ರೀಯ ದರಗಳನ್ನು ಪ್ರತಿಫಲಿಸುತ್ತಿಲ್ಲ. ಬೇಡಿಕೆ ಮತ್ತು ಪೂರೈಕೆ ನಡುವಿನ ಸಮತೋಲನ ಕಾಯ್ದುಕೊಳ್ಳಲು ದರದಲ್ಲಿ ಪರಿಷ್ಕೃರಣೆ ಮಾಡುವ ಅಗತ್ಯ ಇದೆ.