ಬೆಂಗಳೂರು: ಇಲಾಖಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗದಿದ್ದರೂ 37 ಮಂದಿ ಬೋಧಕೇತರ ಸಿಬ್ಬಂದಿಯ ಪ್ರೊಬೇಷನರಿ ಅವಧಿ ಮುಕ್ತಾಯವಾಗಿದೆ ಎಂದು ಘೋಷಿಸಿರುವ ತುಮಕೂರು ವಿಶ್ವವಿದ್ಯಾಲಯದ ಕ್ರಮ ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.
ಡಾ.ಎಸ್.ಸಿ.ಶರ್ಮಾ ಅವರು ಕುಲಪತಿ ಆಗಿದ್ದಾಗ ನಡೆದಿರುವ ಅಕ್ರಮಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಇದರ ಬೆನ್ನಿಗೇ ನಿಯಮಾವಳಿ ಉಲ್ಲಂಘಿಸಿ ತರಾತುರಿಯಲ್ಲಿ ಪ್ರೊಬೇಷನರಿ ಅವಧಿ ಮುಕ್ತಾಯ ಘೋಷಣೆ ಮಾಡಲಾಗಿದೆ. ಈ ಎಲ್ಲ ಸಿಬ್ಬಂದಿ ಶರ್ಮಾ ಅಧಿಕಾರ ಅವಧಿಯಲ್ಲಿ (2010) ನೇಮಕಗೊಂಡಿದ್ದು, 2012ರ ಸೆಪ್ಟೆಂಬರ್, ನವೆಂಬರ್ನಲ್ಲೇ ಎರಡು ವರ್ಷದ ಕಾಯಂಪೂರ್ವ ಸೇವೆ ಪೂರೈಸಿದ್ದರು.
ಆದರೆ, ಇಲಾಖಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿಲ್ಲ ಎಂಬ ಕಾರಣಕ್ಕೆ ಪ್ರೊಬೇಷನರಿ ಅವಧಿ ಮುಕ್ತಾಯವಾಗಿದೆ ಎಂದು 2012ರಲ್ಲಿ ಘೋಷಣೆ ಮಾಡಿರಲಿಲ್ಲ. ಈಗ ಏಕಾಏಕಿ ಪ್ರೊಬೇಷನರಿ ಅವಧಿ ಮುಕ್ತಾಯವಾಗಿದೆ ಎಂದು ಘೋಷಿಸಿರುವುದರ ಹಿಂದಿನ ಮರ್ಮ ಏನು ಎಂಬ ಪ್ರಶ್ನೆ ಸಚಿವಾಲಯದಲ್ಲಿ ಕೇಳಿಬರುತ್ತಿದೆ.
2012ರಿಂದಲೇ ಪೂರ್ವಾನ್ವಯ ಆಗುವಂತೆ ನೌಕರರ ಪ್ರೊಬೇಷನರಿ ಅವಧಿ ಮುಕ್ತಾಯವಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಇದು ಸಹ ವಿವಾದಕ್ಕೆ ಆಸ್ಪದವಾಗಿದೆ. ಇವರ ಪ್ರೊಬೇಷನರಿ ಅವಧಿ 2012ರಲ್ಲಿ ವಿಸ್ತರಣೆ ಆಗಿದ್ದರೆ, ಈಗ ಪೂರ್ವಾನ್ವಯಗೊಳಿಸಿ ಆದೇಶ ಹೊರಡಿಸಲು ಅವಕಾಶ ಇಲ್ಲ. ಪ್ರೊಬೇಷನರಿ ಅವಧಿ ಮುಕ್ತಾಯವಾಗಿದೆ ಎಂದು ಆದೇಶ ಹೊರಡಿಸಿದ ದಿನಾಂಕದಿಂದ ಜಾರಿಯಾಗುತ್ತದೆಯೇ ಹೊರತು, ಹಿಂದಿನಿಂದ ಅನ್ವಯವಾಗುವಂತೆ ಆದೇಶ ಹೊರಡಿಸಲು ನಿಯಮಾವಳಿಯಲ್ಲಿ ಅವಕಾಶ ಇಲ್ಲ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಮೂಲಗಳು ತಿಳಿಸಿವೆ.
37 ಮಂದಿಯಲ್ಲಿ ಬಹುತೇಕ ನೌಕರರು ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದು, ನಿಯಮಾವಳಿಗಳನ್ನು ಉಲ್ಲಂಘಿಸಿ ನೇಮಕಾತಿ ಮಾಡಲಾಗಿದೆ ಎಂಬ ಆರೋಪಗಳಿವೆ.
ವಿ.ವಿ.ಯಲ್ಲಿ ಯಾವುದೇ ಸಿಬ್ಬಂದಿಯನ್ನು ನೇಮಕಾತಿ ಮಾಡಿಕೊಳ್ಳಬೇಕಾದರೆ ‘ನೇಮಕಾತಿ ಮಂಡಳಿ’ಯನ್ನು ಮೊದಲು ರಚಿಸಬೇಕು. ಮಂಡಳಿಯು ವಿ.ವಿ. ನಿಯಮಾವಳಿ ಮತ್ತು ಅರ್ಹತೆ ಆಧರಿಸಿ ಖಾಲಿ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಬೇಕಾಗುತ್ತದೆ. ಆದರೆ, ಈ ಸಿಬ್ಬಂದಿಯ ನೇಮಕಾತಿ ಸಂದರ್ಭದಲ್ಲಿ ಮಂಡಳಿಯೇ ರಚನೆ ಆಗಿರಲಿಲ್ಲ ಎಂದು ಮೂಲಗಳು ತಿಳಿಸಿವೆ.
19 ಮಂದಿ ದ್ವಿತೀಯ ದರ್ಜೆ ಸಹಾಯಕರು, ಆರು ಮಂದಿ ಪ್ರಥಮ ದರ್ಜೆ ಸಹಾಯಕರು, ನಾಲ್ಕು ಮಂದಿ ಬೆರಳಚ್ಚುಗಾರರು, ಮೂವರು ಗ್ರಂಥಾಲಯ ಸಹಾಯಕರು, ತಲಾ ಇಬ್ಬರು ಕಂಪ್ಯೂಟರ್ ಆಪರೇಟರ್ ಹಾಗೂ ಪ್ರಯೋಗಾಲಯ ಸಹಾಯಕರು, ಒಬ್ಬರು ಶೀಘ್ರಲಿಪಿಗಾರರ ನೇಮಕಾತಿ 2010ರಲ್ಲಿ ನಡೆದಿತ್ತು.
ನಿಯಮಾವಳಿಯಲ್ಲಿ ಏನಿದೆ?
1977ರ ಕರ್ನಾಟಕ ನಾಗರಿಕ ಸೇವೆಗಳ ನಿಯಮ 5(2) ಪ್ರಕಾರ 37 ಮಂದಿಯ ಪ್ರೊಬೇಷನರಿ ಅವಧಿ ಮುಕ್ತಾಯವಾಗಿದೆ ಎಂದು ಘೋಷಿಸಿರುವುದಾಗಿ ಈ ತಿಂಗಳ 1ರಂದು ವಿಶ್ವವಿದ್ಯಾಲಯದ ಕುಲಸಚಿವರು ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.
ಆದರೆ, ಈ ನಿಯಮದಡಿ ಪ್ರೊಬೇಷನರಿ ಅವಧಿ ಘೋಷಿಸಬೇಕಾದರೆ, ನಿಯಮ 5 (1) ಎ ಪ್ರಕಾರ ನೌಕರರು ಇಲಾಖಾ ಪರೀಕ್ಷೆಗಳಲ್ಲಿ ಕಡ್ಡಾಯವಾಗಿ ಉತ್ತೀರ್ಣರಾಗಬೇಕು. ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಕರ್ನಾಟಕ ಲೋಕಸೇವಾ ಆಯೋಗ ಇಲಾಖಾ ಪರೀಕ್ಷೆಗಳನ್ನು ನಡೆಸುತ್ತದೆ. ಆದರೆ, ವಿಶ್ವವಿದ್ಯಾಲಯದ ಸಿಬ್ಬಂದಿಗೆ ಆಯಾ ವಿ.ವಿ.ಗಳೇ ಇಲಾಖಾ ಪರೀಕ್ಷೆಗಳನ್ನು ನಡೆಸಬೇಕು. ತುಮಕೂರು ವಿಶ್ವವಿದ್ಯಾಲಯ ಇದುವರೆಗೂ ಇಲಾಖಾ ಪರೀಕ್ಷೆಗಳನ್ನು ನಡೆಸಿಲ್ಲ ಎಂದು ಮೂಲಗಳು ತಿಳಿಸಿವೆ.
‘ನಾನು ನೋಡಿಲ್ಲ’
ನಾನು ಕಡತ ನೋಡಿಲ್ಲ. ಈ ಬಗ್ಗೆ ಪರಿಶೀಲನೆ ಮಾಡಿ ವರದಿ ನೀಡಲು ಕುಲಸಚಿವರಿಗೆ ಸೂಚಿಸಿದ್ದೇನೆ. ವರದಿ ಬಂದ ನಂತರ ವಿವರಗಳನ್ನು ತಿಳಿಸುತ್ತೇನೆ.
– ರಾಜಾಸಾಬ್, ಕುಲಪತಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.