ನವದೆಹಲಿ (ಪಿಟಿಐ): ಅಗತ್ಯ ಅನುಮತಿಗಳನ್ನು ಪಡೆದುಕೊಳ್ಳದೆ ಕಲ್ಲಿದ್ದಲು ನಿಕ್ಷೇಪಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಿದ್ದರೆ ಅದಕ್ಕೆ ಆಯಾ ಕಂಪೆನಿಗಳೇ ಹೊಣೆ. ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಿರುವುದು ಅನುಮತಿ ಪಡೆಯದ ಕಂಪೆನಿಗಳ ಪರವಾನಗಿ ರದ್ದು ಮಾಡದಿರುವುದಕ್ಕೆ ಕಾರಣ ಆಗದು ಎಂದು ‘ಸುಪ್ರೀಂ’ ಹೇಳಿದೆ.
ಇಂತಹ ನಿಕ್ಷೇಪಗಳನ್ನು ಮರು ಹಂಚಿಕೆ ಮಾಡುವ ಉದ್ದೇಶ ಇದೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಈ ನಿಕ್ಷೇಪಗಳಲ್ಲಿ ₨ 2 ಲಕ್ಷ ಕೋಟಿ ಹೂಡಿಕೆ ಮಾಡಲಾಗಿದೆ. ಹಾಗಾಗಿ ಕೆಲವು ಅನುಮತಿಗಳನ್ನು ಪಡೆದುಕೊಂಡಿಲ್ಲ ಎಂಬ ಕಾರಣಕ್ಕೆ ಪರವಾನಗಿ ರದ್ದುಪಡಿಸುವುದು ಕಷ್ಟ ಎಂದು ಅಟಾರ್ನಿ ಜನರಲ್ ವಾದಿಸಿದರು.
‘ಎಷ್ಟೇ ದೊಡ್ಡ ಹೂಡಿಕೆಯನ್ನಾದರೂ ಮಾಡಿರಲಿ. ಅನುಮತಿಗಳನ್ನು ಪಡೆದುಕೊಳ್ಳದೆ ಇರುವುದರ ಪರಿಣಾಮಗಳನ್ನು ಕಂಪೆನಿಗಳು ಎದುರಿಸಲೇಬೇಕು. ಕಾನೂನುಬಾಹಿರವಾಗಿ ನಡೆಸಿರುವ ಕೃತ್ಯಗಳನ್ನು ಶುಲ್ಕ ಪಡೆದು ಸರಿಪಡಿಸಲಾಗದು’ ಎಂದು ಮೂವರು ನ್ಯಾಯಮೂರ್ತಿಗಳನ್ನು ಒಳಗೊಂಡ ಪೀಠದ ಮುಖ್ಯಸ್ಥ ನ್ಯಾಯಮೂರ್ತಿ ಆರ್. ಎಲ್. ಲೋಧಾ ಹೇಳಿದ್ದಾರೆ.
ಅನುಮತಿ ದೊರೆಯಬಹುದು ಎಂಬ ನಿರೀಕ್ಷೆಯೊಂದಿಗೆ ಮಾಡಿರುವ ಹೂಡಿಕೆಯನ್ನು ಸಮರ್ಥಿಸಿಕೊಳ್ಳುವುದು ಸಾಧ್ಯವಿಲ್ಲ. ಕಾನೂನು ಪ್ರಕಾರ ನಿಗದಿತ ಅವಧಿಯೊಳಗೆ ಅನುಮತಿ ಪಡೆಯದಿದ್ದರೆ ಅಂತಹ ನಿಕ್ಷೇಪಗಳ ರಕ್ಷಣೆ ಸಾಧ್ಯವಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ. ಕೇಂದ್ರಕ್ಕೆ ಮುಖಭಂಗ: ಕಾಂಗ್ರೆಸ್ ನೇತೃತ್ವದ ಸರ್ಕಾರದ ಆಳ್ವಿಕೆ ಇರುವ ಮಹಾರಾಷ್ಟ್ರ ಕೇಂದ್ರ ಸರ್ಕಾರಕ್ಕೆ ಮುಖಭಂಗವಾಗುವಂತಹ ಹೇಳಿಕೆ ನೀಡಿದೆ. ಕಲ್ಲಿದ್ದಲು ನಿಕ್ಷೇಪಗಳ ಹಂಚಿಕೆ ಸಂಪೂರ್ಣವಾಗಿ ಕೇಂದ್ರ ಸರ್ಕಾರದಿಂದಲೇ ನಿಯಂತ್ರಿತವಾಗಿದೆ. ರಾಜ್ಯ ಸರ್ಕಾರ ಇಲ್ಲಿ ಕೇಂದ್ರದ ನಿರ್ಧಾರಗಳಿಗೆ ಅಧೀನವಾಗಿ ಕೆಲಸ ಮಾಡಿದೆ ಎಂದು ಮಹಾರಾಷ್ಟ್ರ ಹೇಳಿದೆ. ಈ ಹೇಳಿಕೆ ಕಲ್ಲಿದ್ದಲು ನಿಕ್ಷೇಪ ಹಂಚಿಕೆಯ ಎಲ್ಲ ಅವ್ಯವಹಾರಗಳನ್ನೂ ಕೇಂದ್ರ ಸರ್ಕಾರದ ಮೇಲೆ ಹೊರಿಸುತ್ತದೆ. ಹಾಗಾಗಿ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಜೊತೆಗೆ, ಕೇಂದ್ರದ ಪಾತ್ರ ಕಲ್ಲಿದ್ದಲು ನಿಕ್ಷೇಪಗಳನ್ನು ಗುರುತಿಸುವುದಕ್ಕೆ ಸೀಮಿತ ಎಂಬ ಅಟಾರ್ನಿ ಜನರಲ್ ಜಿ.ಇ.ವಾಹನ್ವತಿ ಅವರ ಹೇಳಿಕೆಯನ್ನೂ ವಿರೋಧಿಸಿದಂತಾಗಿದೆ.
ಆಂಧ್ರ ಪ್ರದೇಶ ಸರ್ಕಾರ ಕೂಡ ಇದೇ ನಿಲುವು ತೆಗೆದುಕೊಂಡಿದೆ. ಇಲ್ಲಿಯೂ ಕಾಂಗ್ರೆಸ್ ನೇತೃತ್ವದ ಸರ್ಕಾರವೇ ಇದೆ.
ಬಿಜೆಪಿ ನಾಯಕನ ವಿರುದ್ಧ ಪ್ರಕರಣ
ಕಲ್ಲಿದ್ದಲು ನಿಕ್ಷೇಪ ಹಂಚಿಕೆಯಲ್ಲಿ 1993ರಿಂದ 2004ರ ವರೆಗಿನ ಅವಧಿಯಲ್ಲಿ ಆಗಿರುವ ಅವ್ಯವಹಾರಗಳ ಬಗ್ಗೆ ಸಿಬಿಐ ಎರಡು ಹೊಸ ಪ್ರಕರಣಗಳನ್ನು ದಾಖಲಿಸಿದೆ.
ಬಿಎಲ್ಎ ಇಂಡಸ್ಟ್ರೀಸ್, ಕಾಸ್ಟ್ರನ್ ಟೆಕ್ನಾಲಜೀಸ್, ಕಾಸ್ಟ್ರನ್ ಮೈನಿಂಗ್, ಬಿಎಲ್ಎ ಇಂಡಸ್ಟ್ರೀಸ್ನ ವ್ಯವಸ್ಥಾಪಕ ನಿರ್ದೇಶಕರು, ಕೆಲವು ಸರ್ಕಾರಿ ಅಧಿಕಾರಿಗಳು ಮತ್ತು ಇತರ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಬಿಎಲ್ಎ ಇಂಡಸ್ಟ್ರೀಸ್ನ ವ್ಯವಸ್ಥಾಪಕ ನಿರ್ದೇಶಕ ಅನೂಪ್ ಅಗರ್ವಾಲ್ ಅವರು ಬಿಜೆಪಿಯ ನಾಯಕ. ಅವರು ಜಾರ್ಖಂಡ್ ಬಿಜೆಪಿ ಕಾರ್ಯಕಾರಿ ಸಮಿತಿಯ ಕಾಯಂ ಆಹ್ವಾನಿತ ಮತ್ತು ರಾಷ್ಟ್ರೀಯ ಕಾರ್ಯಕಾರಿಣಿಯ ವಿಶೇಷ ಆಹ್ವಾನಿತ. ಇದೇ ಮೊದಲ ಬಾರಿ ಬಿಜೆಪಿ ನಾಯಕರೊಬ್ಬರ ಹೆಸರು ಕಲ್ಲಿದ್ದಲು ಹಗರಣದಲ್ಲಿ ಕೇಳಿ ಬಂದಿದೆ.
ಅಗರ್ವಾಲ್ ಅವರ ಕಂಪೆನಿಯು ವರ್ಷಕ್ಕೆ ₨ 100 ಕೋಟಿ ಮೌಲ್ಯದ ಕಲ್ಲಿದ್ದಲನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದೆ ಎಂದು ಸಿಬಿಐ ಹೇಳಿದೆ. ಈ ಕಂಪೆನಿಗೆ ಎಚ್.ಡಿ.ದೇವೇಗೌಡ ಅವರು ಪ್ರಧಾನಿಯಾಗಿದ್ದಾಗ 1996ರ ಜೂನ್ 21ರಂದು ಕಲ್ಲಿದ್ದಲು ನಿಕ್ಷೇಪ ಹಂಚಿಕ ಮಾಡಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.