ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ನಿರಂತರ ಗುರು ಸ್ಮರಣೆ ಮಾಡಿ'

Last Updated 3 ಡಿಸೆಂಬರ್ 2012, 6:55 IST
ಅಕ್ಷರ ಗಾತ್ರ

ಧಾರವಾಡ: ಗುರುಗಳ ಸ್ಮರಣೆ ನಿರಂತರ ಮಾಡುತ್ತಿದ್ದರೆ, ಯಾವ ಆಪತ್ತುಗಳಿಗೂ ಹೆದರದೇ ಎದುರಿಸಬಹುದು ಮತ್ತು ಅವುಗಳಿಂದ ಪಾರಾಗಬಹುದು ಎಂದು ಉತ್ತರಾದಿಮಠದ ಸತ್ಯಾತ್ಮ ತೀರ್ಥರು ಹೇಳಿದರು.

ಸತ್ಯಪ್ರಮೋದತೀರ್ಥರ ಪಾದುಕಾ ಸಮಾರಾಧನ ಸೇವಾ ಸಮಿತಿಯ ಆಶ್ರಯದಲ್ಲಿ ನಡೆದಿರುವ ಶ್ರೀಮನ್ನ್ಯಾಯಸುಧಾ ಮಂಗಳಮಹೋತ್ಸವ, 108ನೆಯ ಶ್ರೀ ಮಧ್ವಸಿದ್ಧಾಂತ ಅಭಿವೃದ್ಧಿ ಕಾರಿಣಿ ಸಭಾ, ಸತ್ಯಧ್ಯಾನತೀರ್ಥರ ಪೀಠಾರೋಹಣ ಶತಮಾನೋತ್ಸವ, ಸತ್ಯಪ್ರಮೋದ ತೀರ್ಥರ ಹದಿನೈದನೆಯ ಪಾದುಕಾ ಮಹಾ ಸಮಾರಾಧನೆಯ ಅಂಗವಾಗಿ ನಡೆಯುತ್ತಿರುವ ಕಾರ್ಯಕ್ರಮಗಳ ನಾಲ್ಕನೆಯ ದಿವಸದ ಕೊನೆಯಲ್ಲಿ ತಮ್ಮ ಅನುಗ್ರಹ ಪ್ರವಚನ ನೀಡಿದ ಅವರು,

ಇದಕ್ಕೆ ಒಳ್ಳೆಯ ಉದಾಹರಣೆ ಎಂದರೆ ತಮ್ಮ ಗುರುಗಳಾದ ಸತ್ಯಪ್ರಮೋದತೀರ್ಥರು. ಅವರು ತಮ್ಮ ಜೀವನದಲ್ಲಿ ಪೀಠಾರೋಹಣದ ಮೊದಲು ಮತ್ತು ನಂತರ ಬಂದ  ಎಡರುತೊಡರುಗಳನ್ನು ಗುರುಗಳ ಸ್ಮರಣೆ ಮಾಡುತ್ತಾ ಎದುರಿಸಿ, ಐದು ದಶಕಗಳ ಕಾಲ ಅನೂಚಾನವಾಗಿ ಬ್ರಹ್ಮ ಕರಾರ್ಚಿತ ಮೂಲರಾಮಚಂದ್ರನ ಪೂಜೆಯನ್ನು ಮಾಡಿ ಒಂದು ದಾಖಲೆಯನ್ನೇ ಮಾಡಿದರು ಎಂದರು.

ನಮ್ಮ ಹಿರಿಯರು ತಮ್ಮ ಸನ್ನಡತೆಯಿಂದ ಭಗವಂತನನ್ನು ಆರಾಧಿಸುವ ಮೂಲಕ ನಮಗೆ ಸುಖ ಸಂತೋಷವನ್ನು ತಂದುಕೊಟ್ಟಿದ್ದಾರೆ. ಅದೇ ಆಚರಣೆಯನ್ನು ನಾವು ಮುಂದುವರಿಸಿದರೆ ಇದರ ಲಾಭವು ನಮ್ಮ ನಂತರದ ತಲೆಮಾರಿನ ಮಕ್ಕಳು ಮತ್ತು ಮೊಮ್ಮಕ್ಕಳಿಗೆ ಹರಿದು ಬರುತ್ತದೆ ಎಂದು ಹೇಳಿದರು.

ಒಂದು ಹನಿ ನೀರನ್ನು ಹಾಕಿ ತುಳಸಿ ದಳವನ್ನು ಭಗವಂತನಿಗೆ ಏರಿಸಿ, ದೀಪ ಮಂಗಲಾರತಿ ಮಾಡಿ ನೈವೇದ್ಯ ತೋರಿಸುವುದಕ್ಕೆ ಹೆಚ್ಚು ಸಮಯ ಹತ್ತುವುದಿಲ್ಲ. ವಿಶ್ರಾಂತಿ ಜೀವನ ನಡೆಸುತ್ತಿರುವವರು, ವಿಸ್ತೃತ ಪೂಜೆಯನ್ನು ಕೈಕೊಳ್ಳಬಹುದು. ಇದಕ್ಕಾಗಿ ದೃಢತೆ ಬೇಕು. ಶುದ್ಧವಾದ ಸದಾಚಾರ, ಶೌಚ ಮತ್ತು ಅದಮ್ಯ ನಿಷ್ಠೆ ಅವಶ್ಯ. ನಿತ್ಯ ಪೂಜೆ ಮಾಡದೇ ಒಂದು ಹನಿ ನೀರನ್ನು ಬಾಯಿಯಲ್ಲಿ ಹಾಕುವದಿಲ್ಲವೆಂಬ ಸಂಕಲ್ಪ ಬೇಕು ಎಂದು ಶ್ರೀಗಳು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT