ಯಲಹಂಕ: ಬೆಂಗಳೂರು ಉತ್ತರ ತಾಲ್ಲೂಕು ಅದ್ದೆ ಗ್ರಾಮದ ನಿರಂತರ ಟ್ರಸ್ಟ್ ವತಿಯಿಂದ `ಭೂಮಿಹಬ್ಬ' ದೊಡ್ಡಬಳ್ಳಾಪುರ ಮುಖ್ಯರಸ್ತೆ ಅದ್ದೆ-ಸುರದೇನುಪುರದ ಮಧ್ಯದಲ್ಲಿರುವ ಅಂದಾನಪ್ಪ ಅವರ ಹೊಲದಲ್ಲಿ ಭಾನುವಾರ ನಡೆಯಲಿದೆ.
ಬೆಳಿಗ್ಗೆ 10ಕ್ಕೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ಸಂಜೆ 5ಕ್ಕೆ ಗ್ರಾಮ ದೇವರಾದ ದುರ್ಗದಮ್ಮ ದೇವಿ, ಮುನೇಶ್ವರಸ್ವಾಮಿ, ಮೂರುಮಕದಮ್ಮ ದೇವಿ, ಹನುಮಂತರಾಯಸ್ವಾಮಿ ದೇವರನ್ನು ಮೆರವಣಿಗೆ ಮೂಲಕ ವೇದಿಕೆಯ ಬಳಿಗೆ ತರಲಾಗುವುದು.
ರಾತ್ರಿ 8 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ನಾಗಮೋಹನದಾಸ್, ಜನವಾದಿ ಮಹಿಳಾ ಸಂಘಟನೆಯ ಡಾ.ಕೆ.ನೀಲಾ, ಕವಿ ಸುಬ್ಬು ಹೊಲೆಯಾರ್ ಮತ್ತಿತರರು ಭಾಗವಹಿಸಲಿದ್ದಾರೆ.
ಜಯದೇವ ಹೃದ್ರೋಗ ಹಾಗೂ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್, ಪ್ರಗತಿಪರ ರೈತ ನಾಯಕಿ ಸುಲೋಚನಮ್ಮ ವೆಂಕಟರೆಡ್ಡಿ, ಕಲಾ ನಿರ್ದೇಶಕ ಶಶಿಧರ ಬಿ. ಅಡಪ, ಹೆಬ್ಬಾಳ ಪಶು ವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಎಂ.ನಾರಾಯಣಸ್ವಾಮಿ, ಪ್ರಗತಿಪರ ರೈತ ದಿಬ್ಬೂರು ಚೌಡಪ್ಪ ಅವರನ್ನು ಸನ್ಮಾನಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.