ನವದೆಹಲಿ (ಐಎಎನ್ಎಸ್): ತಮ್ಮ ಮೂರು ದಿನಗಳ ನಿರಶನ ಯಾವುದೇ ~ನಿರ್ದಿಷ್ಟ ಸಮುದಾಯ ಅಥವಾ ಧರ್ಮವನ್ನು~ ಸೆಳೆಯುವ ಗುರಿಯದ್ದಲ್ಲ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಭಾನುವಾರ ಇಲ್ಲಿ ಷ್ಪಷ್ಟ ಪಡಿಸಿದರು. ಆದರೆ 2002ರಲ್ಲಿ 1000 ಜೀವಗಳನ್ನು, ಬಹುತೇಕ ಮುಸ್ಲಿಮರನ್ನು ಬಲಿ ತೆಗೆದುಕೊಂಡ ಕೋಮು ಗಲಭೆಗಳು ಸಂಭವಿಸಿದ ಗುಜರಾತಿನಲ್ಲಿ ಜನತೆ ~ತೀವ್ರ ದುಃಖ ಅನುಭವಿಸಿದ್ದು ನಿಜ~ ಎಂದು ಅವರು ಒಪ್ಪಿಕೊಂಡರು.
~ಸದ್ಭಾವನಾ ನಿರಶನ ಯಾವುದೇ ನಿರ್ದಿಷ್ಟ ಸಮುದಾಯ ಅಥವಾ ಧರ್ಮಕ್ಕೆ ಸಂಬಂಧಿಸಿದ್ದಲ್ಲ. ಅದು ಗುಜರಾತ್ ಜನತೆಗೆ ಸಂಬಂಧಿಸಿದ್ದು. ಗುಜರಾತಿನ ಪ್ರಗತಿ ಭವಿಷ್ಯದ ದಾರಿಯನ್ನು ತೋರಿಸಿದೆ~ ಎಂದು ಮೋದಿ ತಮ್ಮ ನಿರಶನದ ಎರಡನೇ ದಿನ ಹೇಳಿದರು. ಭಾರತೀಯ ಜನತಾ ಪಕ್ಷ (ಬಿಜೆಪಿ) ನಾಯಕರು ಈ ಸದ್ಭಾವನಾ ನಿರಶನವನ್ನು ವ್ಯಾಪಕವಾಗಿ ಸ್ವಾಗತಿಸಿದ್ದಾರೆ.
~ಗುಜರಾತಿನ ಜನ ತೀವ್ರ ನೋವು ಅನುಭವಿಸಿದ್ದಾರೆ. ನೋವು ಅನುಭವಿಸಿದ ಕುಟುಂಬಗಳ ಬಗ್ಗೆ ನನಗೆ ಅನುಕಂಪವಿದೆ. ನಾನು ಈಗಲೂ ನೋವು ಅನುಭವಿಸುತ್ತಿದ್ದೇನೆ~ ಎಂದು ಮೋದಿ 2002ರ ಗುಜರಾತ್ ಕೋಮು ಹಿಂಸಾಚಾರವನ್ನು ಪ್ರಸ್ತಾಪಿಸುತ್ತಾ ಹೇಳಿದರು.
~ನಮ್ಮ ಗುರಿ ಒಗ್ಗಟ್ಟಿನ ಸಾಧನೆ, ವಿಭಜಿಸುವುದಲ್ಲ. ಗುಜರಾತ್ ನನ್ನ ಕುಟುಂಬ. ಆರು ಕೋಟಿ ಗುಜರಾತಿಗಳ ಸಂತಸ, ದುಃಖ, ಕನಸುಗಳು ಮತ್ತು ಆಶಯಗಳು ನನ್ನವು~ ಎಂದು ಮೋದಿ ದೃಢ ಪಡಿಸಿದರು.
ಗುಜರಾತ್ ವಿಶ್ವ ವಿದ್ಯಾಲಯ ಆವರಣದಲ್ಲಿ ಮೋದಿ ನಿರಶನ ನಡೆಯುತ್ತಿದ್ದು, ಎರಡನೇ ದಿನಕ್ಕೆ ಪ್ರವೇಶಿಸಿದೆ. ಇದು ಅಲ್ಪಸಂಖ್ಯಾತರನ್ನು ಓಲೈಸುವ ಯತ್ನ ಎಂದು ಹೇಳಲಾಗುತ್ತಿದೆ.
ಶಾಂತಿ, ಏಕತೆ ಮತ್ತು ಸಾಮರಸ್ಯಕ್ಕಾಗಿ ನಡೆಸುತ್ತಿರುವ ನಿರಶನ ವೇಳೆ ತಮ್ಮ ದಶಕದ ಆಡಳಿತದ ಸಾಧನೆಗಳನ್ನು ವಿವರಿಸಿದರು.