ಬೆಂಗಳೂರು: ‘ರೈಲ್ವೆ ಬಜೆಟ್ನಿಂದ ಸಂತಸವಾಗಿದೆ, ಇದರಲ್ಲಿ ರಾಜ್ಯಕ್ಕೆ ಆದ್ಯತೆ ನೀಡಲಾಗಿದೆ’ ಎನ್ನುವುದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪ್ರತಿಕ್ರಿಯೆಯಾದರೆ ರಾಜ್ಯ ಬಿಜೆಪಿ ರೈಲ್ವೆ ಬಜೆಟ್ ಅನ್ನು ‘ನಿರಾಶಾದಾಯಕ’ ಎಂದು ಬಣ್ಣಿಸಿದೆ.
‘ರೈಲ್ವೆ ಬಜೆಟ್ನಲ್ಲಿ ರಾಜ್ಯಕ್ಕೆ ಹೊಸ ಯೋಜನೆಗಳ ಘೋಷಣೆ ಆಗಿಲ್ಲ. ಹೊಸ ರೈಲು ಮಾರ್ಗಗಳ ನಿರ್ಮಾಣವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ’ ಎಂದು ಬಿಜೆಪಿಯ ಮಾಧ್ಯಮ ಸಂಯೋಜಕ ಎಸ್. ಪ್ರಕಾಶ್ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
‘ತುಮಕೂರು-ದಾವಣಗೆರೆ, ಗುಲ್ಬರ್ಗ-ಬೀದರ್, ಗದಗ-ಹಾವೇರಿ ನಡುವೆ ಹೊಸ ಮಾರ್ಗಗಳ ನಿರ್ಮಾಣಕ್ಕೆ ಈ ಬಜೆಟ್ನಲ್ಲಿ ಹಣ ನೀಡಲಾಗುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ಈ ಕುರಿತು ಯಾವುದೇ ಪ್ರಸ್ತಾಪ ಮುಂಗಡ ಪತ್ರದಲ್ಲಿ ಇಲ್ಲ’ ಎಂದು ಬಿಜೆಪಿ ಹೇಳಿದೆ.
‘ರಾಜ್ಯದ ಹಿತ ಕಾಪಾಡುವುದರಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ ಸಂಪೂರ್ಣವಾಗಿ ವಿಫಲರಾಗಿರುವ ಹಿನ್ನೆಲೆಯಲ್ಲಿ ಅವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದೆ.
ಘೋಷಣೆಯಾದ ರೈಲುಗಳನ್ನು ಇಲಾಖೆ ತ್ವರಿತವಾಗಿ ಆರಂಭಿಸಬೇಕು ಎಂದು ರಾಜ್ಯ ಬಿಜೆಪಿ ಒತ್ತಾಯಿಸಿದೆ.