ಅರಸೀಕೆರೆ: ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಅವಕಾಶ ವಂಚಿತರು, ಊರು ಊರು ಸುತ್ತುವ ಅಲೆಮಾರಿ ಜನಾಂಗದವರನ್ನು ಗುರುತಿಸಿ ಅವರಿಗೆ ಸಾಮಾಜಿಕ ಭದ್ರತೆ ಒದಗಿಸುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ತಹಶೀಲ್ದಾರ್ ಕೇಶವಮೂರ್ತಿ ಈಚೆಗೆ ತಿಳಿಸಿದರು.
ತಾಲ್ಲೂಕಿನ ಹಾರನಹಳ್ಳಿ ಗ್ರಾಮದಲ್ಲಿ ನಿರ್ಗತಿಕರನ್ನು ಪತ್ತೆ ಹಚ್ಚುವ ಕಾರ್ಯಕ್ಕೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಾಲ್ಲೂಕಿನಾದ್ಯಂತ ಈಗಾಗಲೇ ಪ್ರಕ್ರಿಯೆ ಆರಂಭಗೊಂಡಿದೆ, 2011ರ ಜನಗಣತಿ ಅನ್ವಯದಂತೆ ಸೂರಿಲ್ಲದವರು ಯಾವುದೇ ಜಾತಿ ಪಟ್ಟಿಗೆ ಸೇರ್ಪಡೆಗೊಳ್ಳದಿರುವ ಅಲೆಮಾರಿ ಜನಾಂಗದವರು ಸೇರಿದಂತೆ ಸೌಲಭ್ಯ ವಂಚಿತರಾಗಿದ್ದರೆ, ಅವರಿಗೆ ಸೌಲಭ್ಯ ಒದಗಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಗ್ರಾಮಾಂತರ ಪ್ರದೇಶದಲ್ಲಿ 14, ನಗರ ಪ್ರದೇಶದಲ್ಲಿ 25 ಮಂದಿ ಸೂರಿಲ್ಲದವರ ಪಟ್ಟಿ ಹಾಗೂ ಜನಗಣತಿಗೆ ಸೇರಿಸಲಾಗಿದೆ ಎಂದು ಕೇಶವಮೂರ್ತಿ ಮಾಹಿತಿ ನೀಡಿದರು. ಗ್ರಾಮಲೆಕ್ಕಾಧಿಕಾರಿ ಯದು ಕುಮಾರ್, ಸಾಮಾಜಿಕ ಗಣತಿ ಮೇಲ್ವಿಚಾರಕ ಮಂಜುನಾಥ್, ಕಸಬಾ ಹೋಬಳಿಯ ರಾಜಸ್ವ ನಿರೀಕ್ಷಕ ನಂಜುಂಡಪ್ಪ ಇದ್ದರು.