ಕೋಲ್ಕತ್ತ (ಪಿಟಿಐ): ತಮ್ಮ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿರುವ ಯುವ ವಕೀಲೆ ಒಂದು ವೇಳೆ ಪೊಲೀಸ್ ಪ್ರಕರಣ ದಾಖಲಿಸಿದಲ್ಲಿ ಮುಂದೇನು ಮಾಡಬೇಕು ಎಂಬುದರ ಬಗ್ಗೆ ಇನ್ನೂ ನಿರ್ಧಾರಮಾಡಿಲ್ಲ ಎಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅಶೋಕ ಕುಮಾರ್ ಗಂಗೂಲಿ ತಿಳಿಸಿದ್ದಾರೆ.
ಈ ಕುರಿತ ಸುದ್ದಿಗಾರರ ಪ್ರಶ್ನೆಗಳಿಗೆ ಸಿಟ್ಟಿನಿಂದಲೇ ಉತ್ತರಿಸಿದ ನ್ಯಾ. ಗಂಗೂಲಿ, ‘ಅನೇಕರು ನನ್ನ ಹೇಳಿಕೆಗಳನ್ನು ತಿರುಚುತ್ತಿದ್ದಾರೆ. ಈಗಿನ ಸನ್ನಿವೇಶದಲ್ಲಿ ನಾನು ಈ ಬಗ್ಗೆ ಯಾವುದೇ ನಿರ್ಧಾರಕ್ಕೂ ಬಂದಿಲ್ಲ’ ಎಂದರು.
ಘಟನೆಯ ಬಗ್ಗೆ ಠಾಣೆಯಲ್ಲಿ ಎಫ್ಐಆರ್ ದಾಖಲಿಸುವಂತೆ ಮಹಿಳಾ ಹಕ್ಕು ಕಾರ್ಯಕರ್ತೆ ಸಂತಶ್ರೀ ಅವರು ಮಂಗಳವಾರ ಯುವ ವಕೀಲೆಗೆ ಮನವಿ ಮಾಡಿದ್ದಾರೆ.