ಬಾಗಲಕೋಟೆ: ಮೇ 5ರಂದು ನಡೆಯುವ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ನಿರ್ಭಯವಾಗಿ ಮತದಾನ ಮಾಡಲು ಹಾಗೂ ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ನಗರದಲ್ಲಿ ಸಿಆರ್ಪಿಎಫ್ ಹಾಗೂ ಪೊಲೀಸ್ ಸಿಬ್ಬಂದಿ ಗುರುವಾರ ಪಥಸಂಚಲನ ನಡೆಸುವ ಮೂಲಕ ಜಾಗೃತಿ ಮೂಡಿಸಿದರು.
ನಗರದ ಅಂಜುಮನ್ ಕಾಲೇಜು ಆವರಣದಿಂದ ಆರಂಭವಾದ ಪಥಸಂಚಲನ, ಪಂಕಾಮಸೀದಿ, ಬಸವೇಶ್ವರ ಸಹಕಾರಿ ಬ್ಯಾಂಕ್, ಟೆಂಗಿನಮಠ, ಬಸವೇಶ್ವರ ಕಾಲೇಜು ರಸ್ತೆಯ ಮೂಲಕ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ದುರ್ಗಾ ವಿಹಾರ ಹೋಟೆಲ್, ನೀರಿನ ಟ್ಯಾಂಕ್, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ರಸ್ತೆಯ ಮಾರ್ಗವಾಗಿ ಸಕ್ರಿ ಕಾಲೇಜು ಆವರಣ ತಲುಪುವ ಮೂಲಕ ಸಮಾರೋಪಗೊಂಡಿತು.
ಶಸ್ತ್ರ ಸಜ್ಜಿತ 250 ಸಿಆರ್ಪಿಐ ಯೋಧರು, ಕೆಎಸ್ಆರ್ಪಿ ಸಿಬ್ಬಂದಿ ಮತ್ತು 200 ಪೊಲೀಸ್ ಸಿಬ್ಬಂದಿ ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು.ಡಿಎಸ್ಪಿ ಕೆ.ಶೇಷಾದ್ರಿ, ಸಿಪಿಐ ಭೂಮರಡ್ಡಿ, ಸದಾಶಿವ ಕಟ್ಟಿಮನಿ, ಪಿಎಸ್ಐ ಜಿ.ಎಲ್. ಗೌಳಿ, ಪ್ರಭು ಗಂಗನಹಳ್ಳಿ, ಹಿರೇಮಠ, ಚೌಧರಿ ಪಥಸಂಚಲನದ ನೇತೃತ್ವ ವಹಿಸಿದ್ದರು. ಸಾರ್ವಜನಿಕರು ಪಥಸಂಚಲನವನ್ನು ವೀಕ್ಷಿಸಿದರು.