ಹೊಸಕೋಟೆ: ಚಿಂತಾಮಣಿ ರಸ್ತೆಯ ಮಲ್ಲಿಮಾಕನಪುರದಲ್ಲಿ ರಸ್ತೆ ಸಾರಿಗೆ ಸಂಸ್ಥೆಯ ಬಹಳಷ್ಟು ಎಕ್ಸ್ ಪ್ರೆಸ್ ಬಸ್ಗಳನ್ನು ನಿಲುಗಡೆ ಮಾಡದ ಕಾರಣ ತೊಂದರೆ ಆಗಿದೆ ಎಂದು ದೂರಿ ವಿದ್ಯಾರ್ಥಿಗಳು ಸೋಮವಾರ ಪ್ರತಿಭಟನೆ ನಡೆಸಿದರು.
ಮಲ್ಲಿಮಾಕನಪುರ ಸುತ್ತಮುತ್ತಲ ಗ್ರಾಮಗಳಿಂದ ಹೊಸಕೋಟೆ, ಕೃಷ್ಣರಾಜಪುರ ಮತ್ತು ಬೆಂಗಳೂರಿನ ಕಾಲೇಜುಗಳಿಗೆ ಪ್ರತಿದಿನ ನೂರಾರು ವಿದ್ಯಾರ್ಥಿಗಳು ಶಾಲಾ–ಕಾಲೇಜುಗಳಿಗೆ ಹೋಗುತ್ತಿದ್ದಾರೆ. ಎಕ್್ಸಪ್ರೆಸ್ ಬಸ್ಗಳು ನಿಲುಗಡೆ ಮಾಡದ ಕಾರಣ ಪರದಾಡುವಂತಾಗಿದೆ. ಹಿಂದಿನಿಂದಲೂ ಇಲ್ಲಿ ಬಸ್ ನಿಲುಗಡೆಗೆ ಅವಕಾಶವಿದ್ದರೂ ಸಿಬ್ಬಂದಿ ಬಸ್ಗಳನ್ನು ನಿಲ್ಲಿಸುತ್ತಿಲ್ಲ. ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.
ಸುಮಾರು ಎರಡು ಗಂಟೆ ಕಾಲ ಸಾರಿಗೆ ಸಂಸ್ಥೆ ಬಸ್ಗಳನ್ನು ತಡೆಹಿಡಿದಿದ್ದರಿಂದ ಪ್ರಯಾಣಿಕರು ಪರದಾಡಿದರು. ನಂತರ ಸ್ಥಳಕ್ಕೆ ಬಂದ ಚಿಂತಾಮಣಿ ಡಿಪೊ ಅಧಿಕಾರಿಗಳು ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುವ ಆಶ್ವಾಸನೆ ಕೊಟ್ಟ ನಂತರ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.
ಪ್ರತಿಭಟನೆ: ಹಲ್ಲೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಯೊಬ್ಬನನ್ನು ಬಂಧಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ನಂದಗುಡಿ ಪೊಲೀಸ್ ಠಾಣೆ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.
ಕಳೆದ ಶುಕ್ರವಾರ ಬೈಲನರಸಾಪುರ ಗ್ರಾಮ ಪಂಚಾಯಿತಿಯ ಉದ್ಯೋಗ ಖಾತರಿ ಯೋಜನೆಯ ಬಿಲ್ ಪಾವತಿಗೆ ಸಂಬಂಧಿಸಿದಂತೆ ಪಂಚಾಯಿತಿ ಕಚೇರಿಯಲ್ಲಿ ವಾಗ್ವಾದ ನಡೆದು ನಂತರ ಶ್ರೀನಿವಾಸ್ ಮೇಲೆ ಹಲ್ಲೆ ನಡೆದಿತ್ತು. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.