ಬೆಂಗಳೂರು: ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ (ಕೆಎಸ್ಎಪಿಎಸ್) ಕಾರ್ಯಕ್ರಮ ನಿರ್ದೇಶಕರಾಗಿದ್ದ ನಿವೃತ್ತ ಐಎಎಸ್ ಅಧಿಕಾರಿ ಟಿ. ಮುಕ್ತಾಂಬಾ ಮತ್ತು ಇತರ ಮೂವರಿಗೆ ಇಲ್ಲಿನ ಸಿಬಿಐ ವಿಶೇಷ ನ್ಯಾಯಾಲಯ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಕೆಎಸ್ಎಪಿಎಸ್ನ ಹಿಂದಿನ ತಾಂತ್ರಿಕ ಸಹಾಯಕ ಜಿ.ಎಂ. ರೇಣುಕಯ್ಯ, ಬೆಂಗಳೂರಿನ ರಾಹುಲ್ ಫಾರ್ಮಾ ಕಂಪೆನಿಯ ಭರತ್ ಬಿ. ಓಸ್ತ್ವಾಲ್, ಹುಬ್ಬಳ್ಳಿ ಲೈಫ್ ಅಸೋಸಿಯೇಟ್ಸ್ನ ಜಿತೇಂದ್ರ ಕುಮಾರ್ ಓಸ್ತ್ವಾಲ್ ಅವರು ಜೈಲು ಶಿಕ್ಷೆಗೆ ಗುರಿಯಾಗಿರುವ ಇತರರು.
ರಕ್ತ ಸಂಗ್ರಹಿಸಿಡುವ ಪೊಟ್ಟಣಗಳ ಖರೀದಿಯಲ್ಲಿ ಮುಕ್ತಾಂಬಾ ಅವರು ಅವ್ಯವಹಾರ ನಡೆಸಿದ್ದಾರೆ. ನಿಯಮ ಉಲ್ಲಂಘಿಸಿ, ಪೊಟ್ಟಣ ಪೂರೈಸುವ ಗುತ್ತಿಗೆಯನ್ನು ರಾಹುಲ್ ಫಾರ್ಮಾ ಕಂಪೆನಿಗೆ ನೀಡಿದ್ದಾರೆ ಎಂಬ ಆರೋಪಕ್ಕಾಗಿ ಅವರ ವಿರುದ್ಧ ಮೊಕದ್ದಮೆ ದಾಖಲಾಗಿತ್ತು.