ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೃತ್ತ ಪೌರ ಕಾರ್ಮಿಕರ ಪ್ರತಿಭಟನೆ

Last Updated 17 ಜುಲೈ 2013, 7:09 IST
ಅಕ್ಷರ ಗಾತ್ರ

ಬೆಳಗಾವಿ: ನಿವೃತ್ತ ಪೌರ ಕಾರ್ಮಿಕರ ವಸತಿ ಗೃಹಗಳನ್ನು ತೆರವುಗೊಳಿಸುತ್ತಿರುವ ಪಾಲಿಕೆಯ ಕ್ರಮವನ್ನು ವಿರೋಧಿಸಿ ಅಖಿಲ ಭಾರತೀಯ ಸಫಾಯಿ ಮಜ್ದೂರ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.

ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಅವರು, 1995ರ ಮಾರ್ಚ್ 28 ರ ಪಾಲಿಕೆಯ ಸಾಮಾಜಿಕ ನ್ಯಾಯ ಸಮಿತಿ ಠರಾವ್ ಸಂಖ್ಯೆ 179 ರನ್ವಯ ಬೆಳಗಾವಿ ಪಾಲಿಕೆಯಲ್ಲಿ ಸೇವೆ ಸಲ್ಲಿಸುತ್ತಿರುವ 253 ಪೌರ ಕಾರ್ಮಿಕರಿಗೆ ರುಕ್ಮಿಣಿ ನಗರದಲ್ಲಿ ನಿವೇಶನ ಮಂಜೂರು ಮಾಡಲಾಗಿತ್ತು. ಇದರಲ್ಲಿ 35 ಪೌರ ಕಾರ್ಮಿಕರಿಗೆ 22.75 ಅನುದಾನ ಯೋಜನೆಯಡಿ ಪಾಲಿಕೆ ಮನೆ ನಿರ್ಮಿಸಿ ಕೊಟ್ಟಿದೆ. ಆದರೆ, ಸದ್ಯ ವಸತಿಗೃಹಗಳನ್ನು ತೆರವುಗೊಳಿಸಲು ನೋಟೀಸು ನೀಡಲಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಮಂಜೂರಾದ ನಿವೇಶನಗಳಲ್ಲಿ ಎಲ್ಲ ಪೌರ ಕಾರ್ಮಿಕರಿಗೆ ಪಾಲಿಕೆಯವರು 22.75 ಅನುದಾನ ಯೋಜನೆಯಡಿ ಮನೆ ನಿರ್ಮಿಸಿ ಕೊಟ್ಟಿರುವದಿಲ್ಲ. ಆದರೆ, ತೆರವುಗೊಳಿಸಲು ಮುಂದಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನಿವೃತ್ತ ಪೌರ ಕಾರ್ಮಿಕರ ವಸತಿ ಗೃಹಗಳನ್ನು ತೆರವುಗೊಳಿಸುತ್ತಿರುವುದು ಅಮಾನವೀಯ ಕೃತ್ಯವಾಗಿದೆ.

ಆದ್ದರಿಂದ ನಿವೃತ್ತ ಪೌರ ಕಾರ್ಮಿಕರಿಗೆ ನೀಡಿರುವ ತೆರವು ಕಾರ್ಯಾಚರಣೆಯ ನೋಟೀಸು ಹಿಂದಕ್ಕೆ ಪಡೆಯಬೇಕು. ನಿವೃತ್ತ ಪೌರ ಕಾರ್ಮಿಕರ ಪಾಲಿಕೆಯ ವಸತಿಗೃಹಗಳನ್ನು ತೆರವುಗೊಳಿಸಬಾರದು  ಎಂದು ಒತ್ತಾಯಿಸಿದರು. ಶೀಘ್ರವಾಗಿ ತಮ್ಮ ಬೇಡಿಕೆಯು ಈಡೇರದಿದ್ದಲ್ಲಿ ಅನಿರ್ದಿಷ್ಟಾವಧಿ ಮುಷ್ಕರವನ್ನು ಹಮ್ಮಿಕೊಳ್ಳಲಾಗುವುದು ಎಂದು ಮನವಿಯಲ್ಲಿ ಎಚ್ಚರಿಕೆ ನೀಡಲಾಗಿದೆ. 

ರೈತರ ಒತ್ತಾಯ
ಖಾನಾಪುರ ತಾಲ್ಲೂಕಿನಲ್ಲಿ ರೈತರು ಮಾಡಿರುವ ಅರಣ್ಯ ಅತಿಕ್ರಮಣ ಜಮೀನನ್ನು ಸಕ್ರಮಗೊಳಿಸಬೇಕು ಹಾಗೂ ಅರಣ್ಯ ಇಲಾಖೆಯವರು ರೈತರ ಮೇಲೆ ದಾಖಲಿಸಿರುವ ಪ್ರಕರಣವನ್ನು ಹಿಂದಕ್ಕೆ ಪಡೆಯಬೇಕು ಎಂದು ಖಾನಾಪುರ ತಾಲ್ಲೂಕು ರೈತ ಸಂಘದ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಅಧಿಕಾರಿ ಎಫ್.ಎ. ಫೈಜಿ ಅವರಿಗೆ ಸೋಮವಾರ ಈ ಸಂಬಂಧ ಸಂಘದ ಕಾರ್ಯಕರ್ತರು ಮನವಿ ಸಲ್ಲಿಸಿದ್ದಾರೆ.
ಕಳೆದ 40 ವರ್ಷಗಳಿಂದ ಖಾನಾಪುರ ತಾಲ್ಲೂಕಿನ ಅರಣ್ಯ ಪ್ರದೇಶದಲ್ಲಿರುವ ಜಮೀನನ್ನು ಬಳಸಿಕೊಂಡು ಕೃಷಿ ಮಾಡುತ್ತ ಬಂದ ಆದಾಯದಲ್ಲಿ ಜೀವನ ಸಾಗಿಸುತ್ತಿದ್ದೇವೆ. ಆ ಜಮೀನೇ ನಮ್ಮ ಬದುಕಿಗೆ ಆಧಾರವಾಗಿದೆ.

ಆದರೆ, ಕೆಲ ದಿನಗಳ ಹಿಂದೆ ತಾಲ್ಲೂಕಿನ ಗೊಲ್ಲಿಹಳ್ಳಿ ಗ್ರಾಮದಲ್ಲಿ ನಮ್ಮ ಸಂಘಟನೆಯವರು ಅರಣ್ಯ ಇಲಾಖೆಯವರು ನೆಟ್ಟ ಸಸಿಗಳನ್ನು ಕಿತ್ತಿದ್ದಾರೆ ಎಂದು ಆರೋಪಿಸಿ ಅಧಿಕಾರಿಗಳು ಉದ್ದೇಶಪೂರಕವಾಗಿ ದೂರು ದಾಖಲಿಸಿದ್ದಾರೆ. ಇದು ಆಧಾರ ರಹಿತವಾಗಿದ್ದು, ಈ ಪ್ರಕರಣವನ್ನು ಹಿಂದಕ್ಕೆ ಪಡೆಯಬೇಕು.

ಅರಣ್ಯ ಅತಿಕ್ರಮಣ ಮಾಡಿಕೊಂಡಿರುವ ಜಮೀನನ್ನು ರೈತರ ಹೆಸರಿಗೆ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಅಶೋಕ ನೇಸರಿಕರ, ಅರವಿಂದ ಸಾವಂತ, ಸಂತೋಷ ದೇಸಾಯಿ, ದತ್ತ ಕೇಸರಕರ, ದೇಸಾಯಿ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT