ಸೋಮವಾರಪೇಟೆ: ನಿವೇಶನ ಹೊಂದಿಲ್ಲದ ನಿಜವಾಗಿ ಕಡು ಬಡವರಾದ ಫಲಾನುಭವಿಗಳಿಗೆ ಉಚಿತ ನಿವೇಶನ ಹಂಚುವಂತೆ ಆಗ್ರಹಿಸಿ ಇಲ್ಲಿಯ ಇಂದಿರಾ ಗಾಂಧಿ ಅಭಿಮಾನಿಗಳ ಸಂಘದ ಪದಾಧಿಕಾರಿಗಳು ಮಂಗಳವಾರ ಜೇಸಿ ವೇದಿಕೆಯಲ್ಲಿ ಧರಣಿ ನಡೆಸಿದರು.
ಪಟ್ಟಣ ಪಂಚಾಯಿತಿ ವತಿಯಿಂದ ಇಲ್ಲಿಯ ಮಹದೇಶ್ವರ ಬಡಾವಣೆಯಲ್ಲಿ ನಿವೇಶನ ರಹಿತರಿಗೆ ಉಚಿತವಾಗಿ ವಿತರಿಸಲು ಮೀಸಲಿಟ್ಟಿದ್ದ ಕೆಲವು ನಿವೇಶನಗಳನ್ನು ಉಳ್ಳವರಿಗೆ ವಿತರಿಸಿದ್ದು ಈ ಕ್ರಮದಿಂದ ಬಡವರಿಗೆ ಅನ್ಯಾಯವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ವಸತಿಹೀನರೆಂದು ಅರ್ಜಿ ಸಲ್ಲಿಸಿ ನಿವೇಶನ ಪಡೆದ ಕೆಲವರು ಇಂದು ಲಕ್ಷಾಂತರ ರೂ.ಗಳನ್ನು ಖರ್ಚು ಮಾಡಿ ಮನೆ ನಿರ್ಮಿಸುತ್ತಿದ್ದಾರೆ. ನಿಜವಾದ ಫಲಾನುಭವಿಗಳು ಜೋಪಡಿಯಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ ಎಂದು ಇಂದಿರಾಗಾಂಧಿ ಅಭಿಮಾನಿಗಳ ಸಂಘದ ಅಧ್ಯಕ್ಷ ಎಚ್.ಎ.ನಾಗರಾಜ್ ಆರೋಪಿಸಿದರು.
ಬೇರೆ ಕಡೆ ನಿವೇಶನ ಹೊಂದಿರುವ ವ್ಯಕ್ತಿಗಳು ಹಾಗೂ ಆಸ್ತಿಯನ್ನು ಹೊಂದಿರುವ ಫಲಾನುಭವಿಗಳ ಪಟ್ಟಿಯನ್ನು ಪಂಚಾಯಿತಿ ಆಡಳಿತ ಮಂಡಳಿಗೆ ನೀಡಲಾಗಿದೆ. ಅಂತಹ ಫಲಾನುಭವಿಗಳ ನಿವೇಶನಗಳನ್ನು ವಾಪಸ್ ಪಡೆದು ಬಡವರಿಗೆ ಹಂಚಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಸಂಘದ ಕಾರ್ಯದರ್ಶಿ ಎಚ್.ಜಿ.ರಘು, ಪದಾಧಿಕಾರಿಗಳಾದ ಪಳನಿಸ್ವಾಮಿ, ರಾಜಪ್ಪ, ಪ್ರಕಾಶ್, ಪ್ರಶಾಂತ್ ಇದ್ದರು.