ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೇಶನ ವಿವಾದದಲ್ಲಿ ಲೋಕಾಯುಕ್ತ ನ್ಯಾ. ಪಾಟೀಲ

Last Updated 17 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ವಿವಾದಗಳ ಸುಳಿ ಸೃಷ್ಟಿಸಿದ್ದ ನಿವೇಶನ ಹಂಚಿಕೆ ವಿಚಾರ ಈಗ ಮತ್ತೊಮ್ಮೆ ತಲೆ ಎತ್ತಿದೆ. ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಪ್ರಭಾವಿ ರಾಜಕಾರಣಿಗಳು ಮತ್ತು ಅಧಿಕಾರಿಗಳ ವಿರುದ್ಧ ತನಿಖೆ ನಡೆಸುವ ಅಧಿಕಾರ ಹೊಂದಿರುವ ಲೋಕಾಯುಕ್ತರಿಗೇ ಈ ವಿವಾದ ಈಗ ಸುತ್ತಿಕೊಂಡಿದೆ.

ಲೋಕಾಯುಕ್ತ ನ್ಯಾಯಮೂರ್ತಿ ಶಿವರಾಜ್ ವಿ. ಪಾಟೀಲ್ ಮತ್ತು ಅವರ ಪತ್ನಿ ಅನ್ನಪೂರ್ಣಾ ಎಸ್. ಪಾಟೀಲ್ ಅವರು ಗೃಹ ನಿರ್ಮಾಣ ಸಹಕಾರಿ ಸಂಘದ ಉಪನಿಯಮಗಳನ್ನು (ಬೈಲಾ) ಉಲ್ಲಂಘಿಸಿ ತಲಾ ಒಂದು ನಿವೇಶನ ಪಡೆದುಕೊಂಡಿದ್ದಾರೆ ಎಂಬ ಆರೋಪ ಈಗ ಕೇಳಿಬಂದಿದೆ.

ಹಿನ್ನೆಲೆ: ಅನ್ನಪೂರ್ಣಾ ಅವರು ಬೆಂಗಳೂರಿನ ವೈಯಾಲಿಕಾವಲ್ ಗೃಹ ನಿರ್ಮಾಣ ಸಹಕಾರಿ ಸಂಘದ (ವಿಎಚ್‌ಬಿಸಿಎಸ್) ಸದಸ್ಯರಲ್ಲಿ ಒಬ್ಬರು ಎನ್ನಲಾಗಿದೆ. ಅವರು ನಾಗವಾರದ ಬಳಿ 4,012 ಚದರ ಅಡಿ ವಿಸ್ತೀರ್ಣದ ನಿವೇಶನವೊಂದನ್ನು ಸಂಘದಿಂದ 2006ರ ಅಕ್ಟೋಬರ್ 11ರಂದು ಖರೀದಿಸಿದ್ದಾರೆ. ಇದಕ್ಕೂ ಮುನ್ನ, ಅಂದರೆ 1994ರಲ್ಲಿ, ಶಿವರಾಜ್ ಪಾಟೀಲ್ ಅವರು ರಾಜ್ಯ ನ್ಯಾಯಾಂಗ ಇಲಾಖೆ ನೌಕರರ ಗೃಹ ನಿರ್ಮಾಣ ಸಹಕಾರಿ ಸಂಘದಿಂದ ಅಲ್ಲಾಳಸಂದ್ರದಲ್ಲಿ 9,600 ಚದರ ಅಡಿ ವಿಸ್ತೀರ್ಣದ ನಿವೇಶನವೊಂದನ್ನು ಖರೀದಿಸಿದ್ದರು.

ಗೃಹ ನಿರ್ಮಾಣ ಸಹಕಾರಿ ಸಂಘಗಳ ನಿಯಮಾವಳಿಗಳ ಪ್ರಕಾರ, ಯಾವುದೇ ವ್ಯಕ್ತಿ ಅಥವಾ ಅವರ ಕುಟುಂಬದ ಸದಸ್ಯರ ಹೆಸರಿನಲ್ಲಿ ನಗರದಲ್ಲಿ ಒಂದು ನಿವೇಶನ ಅಥವಾ ಮನೆ ಇದ್ದರೆ ಅವರು ಮತ್ತೊಂದು ನಿವೇಶನ ಪಡೆದುಕೊಳ್ಳುವಂತಿಲ್ಲ. ಆದರೆ ಶಿವರಾಜ್ ಪಾಟೀಲ್ ಅವರು ವಸಂತನಗರದಲ್ಲಿ ಸ್ವಂತ ಹೆಸರಿನಲ್ಲಿ ಮನೆ ಹೊಂದಿದ್ದರು. ಬಳಿಕ ಅಲ್ಲಾಳಸಂದ್ರದಲ್ಲಿ 9,600 ಚದರ ಅಡಿಯ ನಿವೇಶನ ಖರೀದಿಸಿದ್ದಾರೆ. ಅವರ ಪತ್ನಿ ನಾಗವಾರದಲ್ಲಿ 4,012 ಚದರ ಅಡಿ ವಿಸ್ತೀರ್ಣದ ನಿವೇಶನ ಪಡೆದುಕೊಂಡಿದ್ದಾರೆ. ಇದು ಗೃಹ ನಿರ್ಮಾಣ ಸಹಕಾರಿ ಸಂಘಗಳ ಉಪನಿಯಮದ ಕಲಂ 10(ಎ)ಯ ಸ್ಪಷ್ಟ ಉಲ್ಲಂಘನೆ ಎಂದು ಕೆಲವು ವಕೀಲರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

`ನಿಯಮ ಉಲ್ಲಂಘಿಸಿಲ್ಲ~
ತಾವಾಗಲಿ ತಮ್ಮ ಪತ್ನಿಯಾಗಲಿ ನಿವೇಶನ ಖರೀದಿ ಮಾಡುವಾಗ ಯಾವುದೇ ನಿಯಮ ಉಲ್ಲಂಘಿಸಿಲ್ಲ ಎಂದು ಶಿವರಾಜ್ ಪಾಟೀಲ್ ಹೇಳುತ್ತಾರೆ. `ನ್ಯಾಯಾಂಗ ಇಲಾಖೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಮೂಲಕ ಪಡೆದ ನಿವೇಶನಕ್ಕೆ ಸುಪ್ರೀಂ ಕೋರ್ಟ್ ಅನುಮೋದನೆ ನೀಡಿದೆ. ವಿಎಚ್‌ಬಿಸಿಎಸ್ ತನ್ನ ಸಾಲ ಪಾವತಿ ಮಾಡಲು ನಿವೇಶನಗಳನ್ನು ಮಾರಾಟ ಮಾಡಲು ಮುಂದಾದಾಗ, ನನ್ನ ಪತ್ನಿ ಹರಾಜಿನಲ್ಲಿ ಆ ನಿವೇಶನ ಖರೀದಿಸಿದರು. ಒಬ್ಬ ವ್ಯಕ್ತಿ ಮತ್ತು ಅವರ ಕುಟುಂಬದ ಸದಸ್ಯರು ಒಂದು ನಿವೇಶನ ಮಾತ್ರ ಹೊಂದಿರಬೇಕು ಎಂಬ ನಿಯಮ ಹರಾಜು ಪ್ರಕ್ರಿಯೆಯಲ್ಲಿ ಖರೀದಿ ಮಾಡುವಾಗ ಅನ್ವಯವಾಗುವುದಿಲ್ಲ~ ಎಂದು ಪಾಟೀಲ್ ಪ್ರತಿಪಾದಿಸುತ್ತಾರೆ.
 
ನಿವೇಶನ ವಾಪಸ್: ಆದರೆ ನಿವೇಶನ ಕುರಿತ ವಿವಾದದ ಕಾವು ಏರುತ್ತಿದ್ದಂತೆಯೇ ಅನ್ನಪೂರ್ಣಾ ಅವರು ನಾಗವಾರದ ತಮ್ಮ ನಿವೇಶನವನ್ನು ಸಂಘಕ್ಕೆ ಬುಧವಾರ (ಸೆ. 14) ವಾಪಸ್ ನೀಡಿದ್ದಾರೆ. `ನನ್ನ ವಿಶ್ವಾಸಾರ್ಹತೆಯನ್ನು ಯಾರೂ ಪ್ರಶ್ನಿಸಬಾರದು ಎಂಬ ಕಾರಣಕ್ಕೆ ಅನ್ನಪೂರ್ಣಾ ಆ ನಿವೇಶನವನ್ನು ಹಿಂದಿರುಗಿಸಿದ್ದಾರೆ~ ಎಂದು ಪಾಟೀಲ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT