ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಷ್ಕ್ರಿಯವಾದ ಅಂಗನವಾಡಿ; ಹೆಚ್ಚಿದ ಅಪೌಷ್ಟಿಕತೆ

ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆಯಲ್ಲಿ ಆಕ್ಷೇಪ
Last Updated 12 ಡಿಸೆಂಬರ್ 2012, 11:08 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯಲ್ಲಿ ಅಪೌಷ್ಟಿಕತೆಯಿಂದ ನರಳುತ್ತಿರುವ ಮಕ್ಕಳ ಬಗ್ಗೆ ಮಾಹಿತಿ ಇಲ್ಲದ ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಕಲ್ಯಾಣ ಅಭಿವೃದ್ಧಿ ಇಲಾಖೆ ಅಧಿಕಾರಿಗಳನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಸೋಮವಾರ ಕೆಡಿಪಿ ಸಭೆಯಲ್ಲಿ ತರಾಟೆಗೆ ತೆಗೆದುಕೊಂಡರು.

ತಾಲ್ಲೂಕಿನ ವಕ್ಕಲೇರಿಯಲ್ಲಿ ಈಚೆಗೆ ಮಗುವೊಂದು ಅಪೌಷ್ಟಿಕತೆಯಿಂದ ಸಾವನ್ನಪ್ಪಿದೆ. ಆದರೆ ಅಧಿಕಾರಿಗಳು ಯಾವುದೇ ಮಾಹಿತಿ ಇಲ್ಲ ಎನ್ನುತ್ತಾರೆ. ಇದು ಹೇಗೆ ಸಾಧ್ಯ? ಎಂದು ಅಧ್ಯಕ್ಷೆ ಚೌಡೇಶ್ವರಿ ಪ್ರಶ್ನಿಸಿದರು.
ನೀವು ಕೇವಲ ಅಂಗನವಾಡಿ ಕಾರ್ಯಕರ್ತೆಯರು ನೀಡುವ ವರದಿಯನ್ನು ನೆಚ್ಚಿಕೊಂಡು ಕೆಲಸ ನಿರ್ವಹಿಸಿದರೆ ಸಮಸ್ಯೆಗಳು ಬಗೆಹರಿಯುವುದಿಲ್ಲ. ಸಮಸ್ಯೆ ಇದ್ದ ಸ್ಥಳಕ್ಕೆ ಭೇಟಿ ನೀಡಬೇಕು ಎಂದು ಸೂಚಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಅಧಿಕಾರಿಗಳು, ಮುಳಬಾಗಲಿನಲ್ಲಿ ಪೌಷ್ಟಿಕ ಸುಧಾರಣಾ ಕೇಂದ್ರ ಸ್ಥಾಪಿಸಲಾಗಿದೆ. ಇಲ್ಲಿ ಮಕ್ಕಳಿಗೆ ಚಿಕಿತ್ಸೆ, ಸೌಲಭ್ಯ ನೀಡಲಾಗುತ್ತದೆ ಎಂದರು.

ಇದೇ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಝುಲ್ಫೀಕರ್ ಉಲ್ಲಾ, ಎಲ್ಲ ಇಲಾಖೆಗಳು ನಿಮಗೆ ಸಹಾಯ ಮಾಡಲು ಸಿದ್ಧವಾಗಿವೆ. ಆದರೆ ನೀವು ಮಾತ್ರ ಪ್ರಗತಿಯತ್ತ ಸಾಗುತ್ತಿಲ್ಲ ಏಕೆ ಎಂದು ಖಾರವಾಗಿ ನುಡಿದರು.

ಇದಕ್ಕೆ ಉತ್ತರಿಸಿದ ಅಧಿಕಾರಿಗಳು, ಇಲಾಖೆಯಲ್ಲಿ ಹಲವು ಹುದ್ದೆಗಳು ಖಾಲಿ ಇವೆ. ಕಾರ್ಯ ಸುಧಾರಣೆಗೆ ನೇಮಕಾತಿ ಆಗಬೇಕು ಎಂದು ಸಮಜಾಯಿಷಿ ನೀಡಿದರು. ಆಗ ಕೆಲವು ಮಾಹಿತಿಗಾಗಿ ತಮ್ಮ ಇಲಾಖೆ ಕಿರಿಯ ಸಿಬ್ಬಂದಿ ಸಹಾಯ ಕೋರಿದಾಗ ಮತ್ತೆ ಟೀಕೆಗೆ ಗುರಿಯಾದರು. ಸಭೆಗೆ ಬರುವವರು ನೀವು, ಮಾಹಿತಿಯನ್ನು ನೀಡುವುದು ನಿಮ್ಮ ಜವಾಬ್ದಾರಿಯಲ್ಲವೆ ಎಂದು ಪ್ರಶ್ನಿಸಿದರು.

ಕಚೇರಿಯಲ್ಲಿ ಕೂತರೆ ಜಿಲ್ಲೆಯಲ್ಲಿ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳು ಕಾಣುವುದಿಲ್ಲ. ಸ್ಥಳಕ್ಕೆ ಭೇಟಿ ನೀಡಿ. ಕ್ರಮ ಕೈಗೊಳ್ಳಿ ಎಂದು ತಾಕೀತು ಮಾಡಿದರು.

ಜಿಲ್ಲೆಯಲ್ಲಿನ ಅಂಗನವಾಡಿ ಕಾರ್ಯಕರ್ತೆಯರು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಇದರಿಂದ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚುತ್ತಿದೆ. ನಿಮ್ಮ ಇಲಾಖೆ ಮಾಹಿತಿಯನ್ನು ಬೇರೆ ಇಲಾಖೆಯವರು ನೀಡುವ ಪರಿಸ್ಥಿತಿ ತಂದುಕೊಂಡಿದ್ದೀರಾ ಎಂದು ಹೇಳಿದರು.

ಅಂಗನವಾಡಿ ಕೇಂದ್ರಗಳಿಗೆ ಸರಿಯಾಗಿ ಅಡುಗೆ ಅನಿಲ ಸಿಲಿಂಡರ್ ವಿತರಣೆಯಾಗುತ್ತಿಲ್ಲ. ಸ್ಟೌ ಕೂಡಾ ಇಲ್ಲ. ಏನಾಗಿದೆ ಸಮಸ್ಯೆ ಎಂಬುದು ನಮಗೆ ಹೇಳಿ ಎಂದು ಚೌಡೇಶ್ವರಿ ಕೇಳಿದಾಗ, ಅಧಿಕಾರಿ ನಿರುತ್ತರರಾದರು.ಜಿಲ್ಲೆಯಲ್ಲಿರುವ 250 ಎಚ್‌ಐವಿ ಬಾಧಿತ ಮಕ್ಕಳಿಗೆ ಐಸಿಡಿಎಸ್ ಯೋಜನೆಯಡಿ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿದರು.

ಇದೇ ವೇಳೆ, ಶ್ರೀನಿವಾಸಪುರದ ರಾಯಲ್ಪಾಡ್ ಆಸ್ಪತ್ರೆ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲು ಎಷ್ಟು ಕಾಲಾವಕಾಶ ಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಪ್ರಶ್ನೆ ಹಾಕಿದರು. ಅರ್ಧಕ್ಕೆ ನಿಂತಿದ್ದ ಕಟ್ಟಡವನ್ನು ಮತ್ತೆ ಕೆಡವಿ ನಿರ್ಮಿಸಲಾಗುತ್ತಿದೆ. ಹೀಗೆ ಕಟ್ಟುವುದು, ಕೆಡುವುವುದನ್ನು ಮೊದಲು ನಿಲ್ಲಿಸಿ.  ಸಮಯ ಹಾಗೂ ಹಣ ಅಪವ್ಯಯವಾಗುವುದು ಬೇಡ ಎಂದು ಸೂಚಿಸಿದರು.

ಸೋಮವಾರ ಲೋಕಾಯುಕ್ತರ ಬಂಧನಕ್ಕೆ ಒಳಗಾದ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಇಲಾಖೆ ಗುಮಾಸ್ತನ ವಿಚಾರ ಸಭೆಯಲ್ಲಿ ಚರ್ಚೆಗೆ ಗ್ರಾಸವಾಯಿತು. ಇದಕ್ಕೆ ಪ್ರತಿಕ್ರಿಯೆ ನೀಡಿದ ನಿಗಮದ ಅಧಿಕಾರಿ, ನಾನು ಎರಡು ದಿನ ರಜೆಯಲ್ಲಿ ಇದ್ದೆ. ಈ ಬಗ್ಗೆ ನನಗೆ ಮಾಹಿತಿ ಇರಲಿಲ್ಲ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷರು, ನೀವು ನೀಡುವ ಸೌಲಭ್ಯಗಳು ನಿಜವಾಗಿಯೂ ಫಲಾನುಭವಿಗಳು ತಲುಪುತ್ತಿವೆಯೊ ಎಂದಾಗ, ಮಾನದಂಡಗಳ ಪ್ರಕಾರವೆ ನೀಡುತ್ತ್ದ್ದಿದೇವೆ ಎಂದು ಅವರು ತಿಳಿಸಿದರು. ಆದರೆ ನಿಮ್ಮ ಇಲಾಖೆ ಸಿಬ್ಬಂದಿಯನ್ನು ಬಂಧಿಸ್ದ್ದಿದಾರಲ್ಲಾ ಎಂದಾಗ ಅಧಿಕಾರಿ ನಿರುತ್ತರಾದರು.

ಸಭೆಯಲ್ಲಿ ಪಡಿತರ ಚೀಟಿ ಕುರಿತು ವಿವರ ಕೇಳಿದ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳು, ಆನ್‌ಲೈನ್ ಪಡಿತರ ಚೀಟಿ ವ್ಯವಸ್ಥೆಯಿಂದ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ ಅದನ್ನು ಸರಿಪಡಿಸುವ ಅಗತ್ಯವಿದೆ. ಹಲವು ಆಪರೇಟರ್‌ಗಳಿಗೆ ಕಂಪ್ಯೂಟರ್ ಬಗ್ಗೆ ಕನಿಷ್ಠ ತಿಳಿವಳಿಕೆ ಇಲ್ಲ ಎಂದು ಹೇಳಿದರು.ಉಪಾಧ್ಯಕ್ಷರಾದ ರತ್ಮಮ್ಮಾ ಗಣೇಶ, ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮೀನಾರಾಯಣ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

`ಪ್ರೆಸ್‌ನವರು ಇಲ್ಲ ತಾನೆ...'
ಹೀಗೆ ಕೇಳಿದ್ದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಝುಲ್ಫೀಕರ್ ಉಲ್ಲಾ. ಅದಕ್ಕೆ ಕಾರಣವಾಗಿದ್ದು ಅಂಬೇಡ್ಕರ್ ಅಭಿವೃದ್ಧಿ ನಿಗಮದ ದ್ವಿತೀಯ ದರ್ಜೆ ಗುಮಾಸ್ತನ ಬಂಧನ ಪ್ರಕರಣ.  `ನೋಡಿ ಒಂದು ವಿಷಯ ಹೇಳ್ತೇನೆ, ಪ್ರೆಸ್‌ನವರೂ ಇಲ್ಲ ತಾನೆ...' ಎಂದು ಮಾತು ಮುಂದುವರಿಸಿದರು `ಇಲಾಖೆಯೊಂದರಲ್ಲಿ ಯಾರೋ ಚೆಕ್ ಬಿಡುಗಡೆಗೆ ಹಣದ ಆಮಿಷವೊಡ್ಡುತ್ತಿದ್ದಾರೆ ಎಂಬ ಆರೋಪ ದೂರವಾಣಿ ಮೂಲಕ ಹೇಳುತ್ತಿದ್ದಾರೆ. ಈಗಲಾದರೂ ಅಧಿಕಾರಿಗಳು ಎಚ್ಚೆತ್ತು ಕೆಲಸ ಮಾಡಬೇಕು' ಎಂದರು.

`ನಿಗಮದ ಅಧಿಕಾರಿಗಳೇ ಬಂಧಿತ  ವ್ಯಕ್ತಿ ನಿಮ್ಮ ಹೆಸರನ್ನು ಲೋಕಾಯುಕ್ತರ ಮುಂದೆ ಹೇಳಿದ್ನಾ ಹೇಗೆ ?' ಎಂದು ಝುಲ್ಫೀಕರ್ ಉಲ್ಲಾ ನಗೆ ಚಟಾಕಿ ಹಾರಿಸಿದರು.  `ಅವರ ಆರೋಪದಿಂದ ನೀವು ಸಂಕಷ್ಟ ಎದುರಿಸಬೇಕಾಗುತ್ತದೆ' ಎಂದು ಕೇಳಿದಾಗ, `ಬಂಧನದ ವಿಷಯ ನನಗೆ ಗೊತ್ತಾಗಿದ್ದೇ ಮುಕ್ಕಾಲು ಗಂಟೆ ನಂತರ ಸರ್' ಎಂದರು. ಮುಂದೆ ಆದರೂ ಎಚ್ಚರಿಕೆಯಿಂದ ಕೆಲಸ ಮಾಡುವಂತೆ ತಿಳಿಸಿದರು.

ಹಂದಿ ಕೂಡಾ ವಾಸಿಸುವುದಿಲ್ಲ

ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಗತಿ ಬಗ್ಗೆ ವಿವರಿಸಿದ ಕೃಷಿ ಮಾರಾಟ ಇಲಾಖೆ ಸಹಾಯಕ ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡ ಅಧ್ಯಕ್ಷರು, ಅಲ್ರೀ ಮಾರುಕಟ್ಟೆ ಪ್ರಾಂಗಣದಲ್ಲಿ ಒಮ್ಮೆ ಕಣ್ಣು ಹಾಯಿಸಿದರೆ ಸಾಕು, ತಿಳಿಯುತ್ತದೆ. ಹಂದಿ ಕೂಡಾ ವಾಸಿಸಲು ಅದು ಯೋಗ್ಯವಾಗ್ಲ್ಲಿಲ. ಸ್ವಚ್ಛತೆ ಕಾಣೆಯಾದಾಗ ಯಾವ ರೀತಿ ಅಭಿವೃದ್ಧಿ ಸಾಧ್ಯ. ಮೊದಲು ಅಲ್ಲಿ ಸ್ವಚ್ಛತೆ ಇರುವಂತೆ ನೋಡಿಕೊಳ್ಳಿ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT