ಮಲೇಬೆನ್ನೂರು: ವಿದ್ಯಾರ್ಥಿವೃಂದ ಅನುಸರಿಸುವ ಮಾರ್ಗ ನಡೆದುಕೊಳ್ಳುವ ರೀತಿ ಉತ್ತಮವಾಗಿದ್ದಲ್ಲಿ ಮಾತ್ರ ನಿಗದಿತ ಗುರಿ ತಲುಪಲು ಸಾಧ್ಯ ಎಂದು ದಾವಣಗೆರೆ ವಿಶ್ವ ವಿದ್ಯಾಲಯದ ಕುಲಪತಿ ಡಾ.ಎಸ್. ಇಂದುಮತಿ ಅಭಿಪ್ರಾಯಪಟ್ಟರು.
ಸಮೀಪದ ಕೊಮಾರನಹಳ್ಳಿಯಲ್ಲಿ ಮಂಗಳವಾರ ಶ್ರೀಮತಿ ಗಿರಿಯಮ್ಮ ಆರ್. ಕಾಂತಪ್ಪ ಶ್ರೇಷ್ಠಿ ಪ್ರಥಮದರ್ಜೆ ಮಹಿಳಾ ಮಹಾವಿದ್ಯಾಲಯ ಹಮ್ಮಿಕೊಂಡಿರುವ ರಾಷ್ಟ್ರೀಯ ಸೇವಾ ಯೋಜನಾ ಶಿಬಿರದಲ್ಲಿ ಅವರು ಮಾತನಾಡಿದರು.
ಆದರ್ಶ ಪ್ರಜೆಗಳಾಗುವತ್ತ ದೇಶಪ್ರೇಮ ಬೆಳೆಸಿಕೊಳ್ಳಿ. ಯಶಸ್ಸು ಸಾಧಿಸಲು ನಿರಂತರ ಪ್ರಯತ್ನವೊಂದೇ ಸನ್ಮಾರ್ಗ ಎಂದರು.ಶಿಬಿರ ಉದ್ಘಾಟಿಸಿದ ಕೇರಳದ ಹರಿಪಾದ ಸ್ವಾಮಿ ವೀರಭದ್ರಾನಂದಜೀ ಮಹಾರಾಜ್ ಮಾತನಾಡಿ, ಇಂದಿನ ವಿದ್ಯಾರ್ಥಿಗಳು, ಭಾವೀ ಭಾರತದ ಪ್ರಜೆಗಳೆಂದು ಭಾವಿಸಿ, ನಿಸ್ವಾರ್ಥವಾಗಿ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ಶಿಬಿರದಲ್ಲಿನ ಅನುಭವ ಹಂಚಿಕೊಂಡು ದೇಶಕ್ಕೆ ಒಳಿತು ಮಾಡಬೇಕು ಎಂದು ಸಲಹೆ ನೀಡಿದರು.
ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಗ್ರಾಮೀಣ ಪ್ರದೇಶದ ಜನಜೀವನ, ಸಮಸ್ಯೆ ಅರಿಯಲು, ನಾಯಕತ್ವದ ಗುಣ ಬೆಳೆಸಿಕೊಳ್ಳಲು, ಜೀವನಶೈಲಿ ಅಧ್ಯಯನಕ್ಕೆ ಶಿಬಿರ ಸಹಕಾರಿ. ಜನರಲ್ಲಿ ವೈಜ್ಞಾನಿಕ, ವೈಚಾರಿಕ ವಿಷಯದ ಕುರಿತು ಅರಿವು ಮೂಡಿಸಿ, ಶಿಬಿರದ ಅನುಭವ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದರು.
ಪ್ರಾಂಶುಪಾಲ ಎಸ್.ಎಚ್. ಪ್ಯಾಟಿ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸೇವಾ ಯೋಜನೆ ಕುರಿತ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಪಿ. ಲಕ್ಷ್ಮಣ್ ಪ್ರಾಸ್ತಾವಿಕ ನುಡಿಗಳ್ನಾಡಿದರು.
ಕಾರ್ಯಕ್ರಮದಲ್ಲಿ ಹರಿಹರದ ಪ್ರಸನ್ನಕುಮಾರ್, ಜಿಲ್ಲಾ ಪಂಚಾಯ್ತಿ ಸದಸ್ಯ ಬೆಣ್ಣೆಹಳ್ಳಿ ಹಾಲೇಶಪ್ಪ, ಹಾಲಿವಾಣ ತಾಲ್ಲೂಕು ಪಂಚಾಯ್ತಿ ಸದಸ್ಯ ಐರಣಿ ಅಣ್ಣೇಶ್, ಹರಿಹರ ಎಪಿಎಂಸಿ ಅಧ್ಯಕ್ಷ ಮಂಜುನಾಥ್. ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಜಿ. ಮಂಜುನಾಥ ಮಾತನಾಡಿದರು. ಗ್ರಾಮಸ್ಥರು, ಬೋಧಕ ಸಿಬ್ಬಂದಿ ಮತ್ತು ಶಿಬಿರಾರ್ಥಿಗಳು ಹಾಜರಿದ್ದರು.