ತ್ಯಾವಣಿಗೆ: ನವಿಲೇಹಾಳ್ ಪೂರಕನಾಲೆ ಮತ್ತು ರಸ್ತೆ ದುರಸ್ತಿಗಾಗಿ ಒತ್ತಾಯಿಸಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ನೀರಾವರಿ ಇಲಾಖೆ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.
ನವಿಲೇಹಾಳ್ ಪೂರಕನಾಲೆ ಮತ್ತು ರಸ್ತೆ ದುರಸ್ತಿ ಕಾಣದೇ ಸುಮಾರು ವರ್ಷಗಳಾಗಿದ್ದು, 3-4ವರ್ಷಗಳಿಂದ ಈ ಕಾಲುವೆ ಮತ್ತು ರಸ್ತೆ ದುರಸ್ತಿ ಬಗ್ಗೆ ನೀರಾವರಿ ಇಲಾಖೆಯ ಗಮನಕ್ಕೆ ತಂದರೂ, ಪ್ರಯೋಜನವಾಗುತ್ತಿಲ್ಲ. ಕಾಲುವೆಯಲ್ಲಿ ಹುಲ್ಲು ಬೆಳೆದು ಹೂಳು ತುಂಬಿಕೊಂಡಿದೆ. ಇದರಿಂದ, ನೀರು ಹರಿಯಲು ಸಾಧ್ಯವಾಗುತ್ತಿಲ್ಲ.
ಬೇಸಿಗೆ ಹಂಗಾಮಿನಲ್ಲಿ ಹೊಲಗಳಿಗೆ ನೀರು ಹಾಯಿಸಲು ಸಾಧ್ಯವಾಗದೇ ಈ ಭಾಗದ ರೈತರು ನಷ್ಟ ಅನುಭವಿಸಿದ್ದಾರೆ ಎಂದು ಪ್ರತಿಭಟನೆ ನಿರತ ರೈತ ಸಂಘದ ಅಧ್ಯಕ್ಷ ಕೆ.ಎಂ. ಕರಿಬಸಪ್ಪ ದೂರಿದರು.
ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ಇಲ್ಲಿನ ಭದ್ರಾನಾಲಾ ಉಪ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಉರ್ ಎ. ಬಸವರಾಜು, ಕೂಡಲೇ ನವಿಲೇಹಾಳ್ ಪಿಕಪ್ನಾಲೆ ಮತ್ತು ರಸ್ತೆ ದುರಸ್ತಿ ಕಾರ್ಯ ಶೀಘ್ರವೇ ಮಾಡಿಸಿಕೊಡುವುದಾಗಿ ಭರವಸೆ ನೀಡಿದರು.
ರೈತ ಸಂಘದ ಕಾರ್ಯದರ್ಶಿ ಕೆ. ವಿಜಯಕುಮಾರ್, ಖಜಾಂಚಿ ಮಂಟಪ್ಳ ಶ್ರೀನಿವಾಸ ಮೂರ್ತಿ, ಗುರುಮೂರ್ತಿ, ಕಂಬಜ್ಜಿ ಮಂಜಪ್ಪ, ಪರಮೇಶ್ವರಪ್ಪ, ನವಿಲೇಹಾಳ್ ರವಿ, ನಾಗರಾಜ್, ಬಾವಿಹಾಳ್ ಸಿದ್ದೇಶ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.