ಯಾದಗಿರಿ: ಸಮರ್ಪಕ ನೀರು ಸರಬರಾಜು ಮಾಡುವಲ್ಲಿ ಸಂಪೂರ್ಣ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಆರೋಪಿಸಿ, ಬಿಎಸ್ಸಾರ್ ಕಾಂಗ್ರೆಸ್ ನೇತೃತ್ವದಲ್ಲಿ ಗ್ರಾಮಸ್ಥರು ಸೋಮವಾರ ತಾಲ್ಲೂಕಿನ ರಾಮಸಮುದ್ರದ ಗ್ರಾಮ ಪಂಚಾಯಿತಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಗ್ರಾಮದಲ್ಲಿ ನೀರಿನ ಸಮಸ್ಯೆ ಇದ್ದರೂ ಸ್ಥಳೀಯ ಗ್ರಾಮ ಪಂಚಾಯಿತಿಯ ನಿರ್ಲಕ್ಷದಿಂದ ಗ್ರಾಮಸ್ಥರು ನೀರಿನ ಸಮಸ್ಯೆಯಿಂದ ಪರದಾಡುತ್ತಿದ್ದಾರೆ. ಗ್ರಾಮದಲ್ಲಿ ನಾಲ್ಕು ಕೊಳವೆ ಬಾವಿಗಳಿದ್ದು, ಸಾಕಷ್ಟು ನೀರು ಇದ್ದರೂ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಇದರಿಂದ ಗ್ರಾಮಸ್ಥರು ನೀರಿಗಾಗಿ ನಿತ್ಯ ಪರದಾಡುವಂತಾಗಿದೆ. ಈ ಬಗ್ಗೆ ಸಾಕಷ್ಟು ಬಾರಿ ಸಂಬಂಧಿಸಿದವರಿಗೆ ಮನವಿ ಸಲ್ಲಿಸಿದರು ಯಾವುದೇ ಪರಿಣಾಮ ಆಗಿಲ್ಲ.
ಇದರಿಂದಾಗಿ ಗ್ರಾಮ ಪಂಚಾಯಿತಿಗೆ ಬೀಗ ಜಡಿಯುವುದು ಅನಿವಾರ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದ್ದೂ ಇಲ್ಲದಂತಿರುವ ಗ್ರಾಮ ಪಂಚಾಯಿತಿ ಸಿಬ್ಬಂದಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕಾರ್ಯಕರ್ತರು, ವಾರದಲ್ಲಿ ನೀರಿನ ಸಮಸ್ಯೆ ಪರಿಹರಿಸಬೇಕು.
ವಿಫಲರಾದರೆ ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ ಎದುರು ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಬಿಎಸ್ಸಾರ್ ಕಾಂಗ್ರೆಸ್ ಪಕ್ಷದ ರಾಜ್ಯ ವಿದ್ಯಾರ್ಥಿ ಘಟಕದ ರಾಜ್ಯ ಉಪಾಧ್ಯಕ್ಷ ಅಶೋಕ ಮುದ್ನಾಳ ಎಚ್ಚರಿಸಿದರು.
ಅಲ್ಲದೇ ರಾಮಸಮುದ್ರ ಗ್ರಾಮ ತೀವ್ರ ಗತಿಯಲ್ಲಿ ಬೆಳೆಯುತ್ತಿರುವ ಗ್ರಾಮವಾಗಿದ್ದು, ಗ್ರಾಮದಲ್ಲಿ ಒಂದೇ ಒಂದು ಕಂಬಕ್ಕೆ ವಿದ್ಯುತ್ ದೀಪ ಇಲ್ಲ. ಇದರಿಂದ ಗ್ರಾಮದ ಗಲ್ಲಿಗಳಲ್ಲಿ ತಿರುಗಾಡುವುದೇ ದುಸ್ತರವಾಗಿದ್ದು, ಇವೆಲ್ಲ ಮೂಲ ಸೌಕರ್ಯಗಳನ್ನು ವಾರದೊಳಗೆ ಪರಿಹರಿಸದಿದ್ದರೆ ಬಿಎಸ್ಸಾರ್ ಕಾಂಗ್ರೆಸ್ ತಾಲ್ಲೂಕು ಘಟಕದ ಮುಖಂಡರ ಬೆಂಬಲದೊಂದಿಗೆ ಉಗ್ರ ಪ್ರತಿಭಟನೆ ಎದುರಿಸ ಬೇಕಾಗುತ್ತದೆ ಎಂದು ಗ್ರಾಮ ಪಂಚಾಯಿತಿಗೆ ಎಚ್ಚರಿಸಿದರು.
ಪಂಚಾಯಿತಿ ಬೀಗ ಮುದ್ರೆ ಕಾರ್ಯಕ್ರಮದಲ್ಲಿ ಬಿಎಸ್ಸಾರ್ ಕಾಂಗ್ರೆಸ್ ಕಾರ್ಯಕರ್ತರಾದ ಮಲ್ಲಪ್ಪ ಮಡಿವಾಳ, ಬಸವರಾಜ ಬಂಗ್ಲಿ, ರಫಿ ಮೊಹ್ಮದ್, ರಮೇಶ ಮಡಿವಾಳ, ನಾಗರಾಜ ಮ್ಯೋಗಳೋರ, ಕಾಶಪ್ಪ ಬಾಗ್ಲಿ, ಮಲ್ಲಪ್ಪ ಮಡಿವಾಳ, ದೇವಪ್ಪ ಮಡಿವಾಳ, ಸುರೇಶ ಮಡಿವಾಳ, ರೆಡ್ಡಪ್ಪ ಬಂಗ್ಲಿ, ಚಾಂದಪಾಷಾ ಅತ್ತಾರ, ರವಿ ಮ್ಯೋಗಳೋರ್, ರವಿ ಬಾಗ್ಲಿ, ತಾಯಪ್ಪ ಬಾಗ್ಲಿ, ಮಲ್ಲಯ್ಯ ದಂಡೆನೋರ್ ಸೇರಿದಂತೆ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.