ಮಂಗಳೂರು: ರಾಜ್ಯದ ಮಹಾನಗರಗಳು ಹಾಗೂ ಇತರ ನಗರ ಸ್ಥಳೀಯಾಡಳಿತ ಪ್ರದೇಶಗಳಲ್ಲಿ ಕುಡಿಯುವ ನೀರಿನ ದರವನ್ನು ಹೆಚ್ಚಿಸುವ ಸಂಬಂಧ ಸರ್ಕಾರ ಸುತ್ತೋಲೆ ಕಳುಹಿಸಿದ್ದರೂ, ಮಂಗಳೂರು ನಗರ ವ್ಯಾಪ್ತಿಯಲ್ಲಿ ನೀರಿನ ದರ ಹೆಚ್ಚಿಸದೆ ಇರಲು ಪಾಲಿಕೆ ನಿರ್ಧರಿಸಿದೆ.
ನೀರಿನ ದರ ವಿಚಾರದಲ್ಲಿ ರಾಜ್ಯದ ಎಲ್ಲಾ ಭಾಗಗಳಿಗೂ ಒಂದೇ ರೀತಿಯ ಮಾನದಂಡ ಅನುಸರಿಸಬಾರದು. ಸ್ಥಳೀಯ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಇಂತಹ ನಿರ್ಧಾರ ಕೈಗೊಳ್ಳಬಾರದು ಎಂದು ಬುಧವಾರ ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಎಲ್ಲಾ 60 ಮಂದಿ ಸದಸ್ಯರು ಪಕ್ಷಭೇದ ಮರೆತು ಒಕ್ಕೊರಲ ಅಭಿಪ್ರಾಯ ವ್ಯಕ್ತಪಡಿಸಿದರು. ಹೀಗಾಗಿ ಸರ್ಕಾರದ ನಿರ್ಧಾರಕ್ಕೆ ಪಾಲಿಕೆಯ ವಿರೋಧ ಇದೆ ಎಂಬ ನಿರ್ಣಯ ಕೈಗೊಳ್ಳಲಾಯಿತು.
~ಮಂಗಳೂರಿಗೆ ಕೇವಲ 18 ಕಿ.ಮೀ. ದೂರದಿಂದ ಕುಡಿಯುವ ನೀರಿನ ಪೂರೈಕೆಯಾಗುತ್ತದೆ. ಹುಬ್ಬಳ್ಳಿ ಸಹಿತ ರಾಜ್ಯದ ಇತರ ಕೆಲವು ಮಹಾನಗರಗಳು, ನಗರಸಭೆಗಳಿಗೆ ನೀರು ಪೂರೈಕೆ ದೂರದ ಪ್ರದೇಶದಿಂದ ಆಗುವುದರಿಂದ ವೆಚ್ಚ ಕೂಡ ಅಧಿಕವಿರುತ್ತದೆ. ಹೀಗಾಗಿ ಅಲ್ಲಿ ದರ ಹೆಚ್ಚಿಸಿದ ಮಾತ್ರಕ್ಕೆ ಮಂಗಳೂರಿನಂತಹ ನಗರಗಳಲ್ಲೂ ಸಹ ನೀರಿನ ದರ ಹೆಚ್ಚಿಸುವುದು ಸೂಕ್ತವಲ್ಲ. ಹೀಗಾಗಿ ಸದಸ್ಯರೆಲ್ಲರ ಅಭಿಪ್ರಾಯಕ್ಕೆ ಸಮ್ಮತಿ ಸೂಚಿಸಿ ಪಾಲಿಕೆ ಕೈಗೊಂಡಿರುವ ಈ ನಿರ್ಧಾರವನ್ನು ಸರ್ಕಾರದ ಗಮನಕ್ಕೆ ತರಲಿದ್ದೇವೆ~ ಎಂದು ಸಚೇತಕ ಸುಧೀರ್ ಶೆಟ್ಟಿ ಹೇಳಿದರು.
ಮೇಯರ್ ಪ್ರವೀಣ್ ಅಂಚನ್, ಉಪಮೇಯರ್ ಗೀತಾ ನಾಯಕ್, ಆಯುಕ್ತ ಕೆ.ಹರೀಶ್ ಕುಮಾರ್ ಇತರರು ಇದ್ದರು.