ರಾಯಬಾಗ: `ತಾಲ್ಲೂಕನ್ನು ಬರಪೀಡಿತವೆಂದು ಎಂದು ಸರ್ಕಾರ ಘೋಷಿಸಿದೆ. ಆದರೆ ಬರ ಪರಿಹಾರಕ್ಕೆ ಹಣ ಬಿಡುಗಡೆಯಾಗಿಲ್ಲ. ಅದರೂ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲಾಗುವುದು~ ಎಂದು ಶಾಸಕ ದುರ್ಯೋಧನ ಐಹೊಳೆ ಹೇಳಿದರು.
ಸೋಮವಾರ ಪಟ್ಟಣದ ಮಿನಿ ವಿಧಾನಸೌಧದಲ್ಲಿ `ಬರಗಾಲ ಪರಿಹಾರ ಹಾಗೂ ಕುಡಿಯುವ ನೀರಿನ ಸಮಸ್ಯೆ~ ಬಗ್ಗೆ ಏರ್ಪಡಿಸಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಾಲ್ಲೂಕಿನ 8 ಗ್ರಾಮಗಳಲ್ಲಿ ಟ್ಯಾಂಕರ ಮೂಲಕ ನೀರನ್ನು ಪೂರೈಸುತ್ತಿದ್ದು ಇದಕ್ಕಾಗಿ ರೂ 25 ಲಕ್ಷ ಹಣ ಬಿಡುಗಡೆಯಾಗಿದೆ. ಬೀಸಲು ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಜಾನುವಾರಗಳಿಗೆ ಬರುಬಾಯಿ ಹಾಗೂ ಕಾಲುಬೇನೆಗೆ ಸೂಕ್ತ ಔಷಧೋಪಚಾರ ಮಾಡುವಂತೆ ಆಧಿಕಾರಿಗಳಿಗೆ ತಿಳಿಸಿದರು.
ಪಿಡಿಒ ಹಾಗೂ ಗ್ರಾ.ಪಂ ಕಾರ್ಯದರ್ಶಿಗಳು ಹೆಚ್ಚು ಜವಾಬ್ದಾರಿ ವಹಿಸಿ ತಮ್ಮ ವ್ಯಾಪ್ತಿಯ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಬಾರದಂತೆ ಎಚ್ಚರಿಕೆ ವಹಿಸುವಂತೆ ಹೇಳಿದರು.
ಬರಗಾಲದಿಂದ ಜನರು ಗುಳೇ ಹೋಗುವುದನ್ನು ತಡೆಯಲು ಸೇವಾ ಕೇಂದ್ರಗಳನ್ನು ತೆರೆದು ಉದ್ಯೋಗ ಖಾತ್ರಿ ಯೋಜನೆಯಡಿ ಜನರಿಗೆ ಕೆಲಸ ದೊರಕಿಸುವಂತೆ ಆದೇಶಿಸಿದರು.
ಜಿ.ಪಂ ಎಂಜಿನಿಯರ್ ಎಸ್.ಎಸ್.ಪಾಟೀಲ ಮಾತನಾಡಿ, ತಾಲ್ಲೂಕಿನ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ವ್ಯವಸ್ಥೆಗೆ ಕೈಗೊಂಡ ಸಿದ್ಧತೆ ಬಗ್ಗೆ ವಿವರಿಸಿದರು. ರೂ 40 ಲಕ್ಷ ಅನುದಾನದಲ್ಲಿ ನೂತನ ಕ್ರಿಯಾ ಯೋಜನೆ ರಚಿಸಲಾಗಿದೆ ಎಂದು ಹೇಳಿದರು.
ಪಶು ಸಂಗೋಪನಾ ಸಹಾಯಕ ನಿರ್ದೇಶಕ ಡಾ.ಕಬ್ಬೂರ ಮಾತನಾಡಿ ಆರು ವಾರಗಳಿಗೆ ಸಾಕಾಗುವಷ್ಟು ಮೇವಿನ ಸಂಗ್ರಹವಿದೆ ವಿವಿರ ನೀಡಿದರು. ತಹಶೀಲ್ದಾರ ಬಿ.ಡಿ.ಗುಗರಟ್ಟಿ ಮಾತನಾಡಿದರು.
ತಾ.ಪಂ ಅಧ್ಯಕ್ಷ ಲಕ್ಷ್ಮಣ ಗವಾನಿ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಎ.ಎಸ್.ಹಲಸೋಡೆ, ಕೃಷಿ ಅಧಿಕಾರಿ ಕೆ.ಎಸ್.ಅಗಸನಾಳ, ಹೆಸ್ಕಾಂ ಎಂಜಿನಿಯರ್ ಶೇಖರ ಬಹುರೂಪಿ, ಕಂದಾಯ ನಿರೀಕ್ಷಕ ಎಸ್.ಬಿ.ಮಣ್ಣೂರ, ಎನ್.ಬಿ. ಗೆಜ್ಜಿ, ನೀರಾವರಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳು ಮತ್ತು ಟ್ಯಾಂಕರ್ ಮಾಲೀಕರು ಸಭೆಯಲ್ಲಿ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.