ವಿಜಾಪುರ: ಜಿಲ್ಲೆಯ ಕೆಲವು ಭಾಗಗಳಲ್ಲಿ ನೀರಿನ ಅಭಾವ ಉಂಟಾಗಿದ್ದು, ಪ್ರತಿ ಹಳ್ಳಿಗೆ ಸಮರ್ಪಕ ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ಸಂಸದ ರಮೇಶ ಜಿಗಜಿಣಗಿ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಮಂಗಳವಾರ ಇಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.
ಸಮಸ್ಯೆ ಎದುರಿಸುತ್ತಿರುವ ಗ್ರಾಮ ಗಳಲ್ಲಿ ಜಲಮೂಲಗಳನ್ನು ಗುರುತಿಸಿ ಅದನ್ನು ಸಮರ್ಪಕವಾಗಿ ಬಳಸಿಕೊಂಡು ಸಮಸ್ಯೆ ಪರಿಹರಿಸಬೇಕು. ಖಾಸಗಿಯವರ ಮನವೊಲಿಸಿ ಅವರ ಸುಪರ್ದಿಯಲ್ಲಿರುವ ನೀರು ಪಡೆದುಕೊಳ್ಳಬೇಕು. ಒಪ್ಪದಿದ್ದರೆ ಕಾನೂನು ಕ್ರಮ ಕೈಗೊಂಡು ಪರಿಹಾರ ನೀಡಿಯಾದರೂ ನೀರು ಪಡೆದು ಗ್ರಾಮಸ್ಥರಿಗೆ ಪೂರೈಸಬೇಕು ಎಂದರು.
ನಮ್ಮ ರಾಜ್ಯದ ಮೇವು ಹೊರ ರಾಜ್ಯಗಳಿಗೆ ರವಾನೆಯಾಗದಂತೆ ಎಚ್ಚರ ವಹಿಸಿ ನಮ್ಮ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಶಾಸಕರಾದ ಡಾ.ಎಸ್.ಎಸ್. ಬಗಲಿ, ವಿಠ್ಠಲ ಕಟಕಧೋಂಡ, ಜಿ.ಪಂ. ಅಧ್ಯಕ್ಷೆ ಶಂಕ್ರುಬಾಯಿ ಚಲವಾದಿ, ಜಿಲ್ಲಾಧಿಕಾರಿ ಶಿವಯೋಗಿ ಕಳಸದ, ಜಿ.ಪಂ. ಸಿಇಒ ಎ.ಎನ್. ಪಾಟೀಲ, ಜಾಗೃತ ಸಮಿತಿ ಸದಸ್ಯರಾದ ಶಿವಾನಂದ ಕಲ್ಲೂರ, ಎಂ.ಎಸ್. ರುದ್ರಗೌಡರ, ಶಾರದಾ ಹಿರೇಮಠ ಇತರರು ಉಪಸ್ಥಿತರಿದ್ದರು.