ಚಳ್ಳಕೆರೆ: ಪಟ್ಟಣದ ಹಲವು ವಾರ್ಡ್ಗಳಲ್ಲಿ ಬೇಸಗೆ ಸೇರಿದಂತೆ ಇನ್ನಿತರ ದಿನಗಳಲ್ಲಿ ಉಲ್ಬಣಿಸುವ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಹಂತ ಹಂತವಾಗಿ ಯೋಜನೆ ರೂಪಿಸಲಾಗುವುದು ಎಂದು ಶಾಸಕ ತಿಪ್ಪೇಸ್ವಾಮಿ ಹೇಳಿದರು.
ಪಟ್ಟಣದ ಮಹಾದೇವಿ ರಸ್ತೆಯಲ್ಲಿ ಸೋಮವಾರ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಎಸ್ಎಫ್ಸಿ ಯೋಜನೆಯ ಅನುದಾನದ ಅಡಿಯಲ್ಲಿ ದುರ್ಗಾವರ ರಸ್ತೆಯ ಬೆಂಜಿಕಟ್ಟೆ ಹತ್ತಿರದಿಂದ ಮದಕರಿ ನಗರದ 25, 26, 27 ವಾರ್ಡ್ಗಳಿಗೆ ಶಾಶ್ವತ ಕುಡಿಯುವ ನೀರಿನ ಸೌಲಭ್ಯ ದೊರೆಯಲಿದೆ. ಇದೇ ರೀತಿ ಪಟ್ಟಣದ ಇನ್ನಿತರ ವಾರ್ಡ್ಗಳಿಗೂ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದರು.
ಪುರಸಭೆ ಸದಸ್ಯರಾದ ಎಂ. ಚೇತನ್ ಕುಮಾರ್, ಆರ್. ಪ್ರಸನ್ನಕುಮಾರ್, ಗಾಡಿ ತಿಪ್ಪೇಸ್ವಾಮಿ, ಡಿ.ಕೆ. ಸೋಮಶೇಖರ್, ನಾಮನಿರ್ದೇಶನ ಸದಸ್ಯರಾದ ಪದ್ಮಾವತಿ ಜಯಣ್ಣ, ಅಲ್ಲಾಭಕಾಷ್, ಡಿ.ಎಂ. ತಿಪ್ಪೇಸ್ವಾಮಿ, ಮುಖ್ಯಾಧಿಕಾರಿ ಐ. ಬಸವರಾಜ್ ಇದ್ದರು.