ಕಾರವಾರ: ತೋಡೂರು ಸೀಬರ್ಡ್ ಪುನರ್ವಸತಿ ಕೇಂದ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು ಪರಿಹಾರ ಕಲ್ಪಿಸಬೇಕು ಎಂದು ಕೇಂದ್ರದ ನಿವಾಸಿಗಳು ಮೀನುಗಾರಿಕೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಆನಂದ ಅಸ್ನೋಟಿಕರ್ ಅವರಿಗೆ ಮನವಿ ಸಲ್ಲಿಸಿದರು.
ಸಚಿವರ ಮನೆಗೆ ಮಂಗಳವಾರ ಭೇಟಿ ನೀಡಿದ ಅಲ್ಲಿಯ ನಿವಾಸಿಗಳು ಪುನರ್ವಸತಿ ಕೇಂದ್ರದಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ಕುಡಿಯುವ ನೀರಿನ ಯೋಜನೆಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಬೇಸಿಗೆಯು ಸಮೀಪಿ ಸುತ್ತಿರುವುದರಿಂದ ಈ ಸಮಸ್ಯೆಯು ಇನ್ನಷ್ಟು ತೀವ್ರವಾಗಲಿದೆ ಎಂದು ಸಚಿವರಿಗೆ ತಿಳಿಸಿದರು.
ಅಹವಾಲು ಆಲಿಸಿದ ಸಚಿವ ಅಸ್ನೋ ಟಿಕರ್ ಅವರು, ದೂರವಾಣಿ ಮೂಲಕ ಸಂಬಂಧಪಟ್ಟ ಇಲಾಖೆಯ ಅಧಿಕಾರಿ ಗಳನ್ನು ಸಂಪರ್ಕ ಮಾಡಿ ಸಮಸ್ಯೆ ಬಗೆಹರಿಸಲು ಸೂಚನೆ ನೀಡಿದರು. ಗ್ರಾಪಂ ಸದಸ್ಯೆ ಪೂರ್ಣಿಮಾ ಮಹೇಕರ, ಗಣಪತಿ ಗೌಡ, ಬಾಬಾ ಮಹೇಕರ, ವಿಮಲಾ ದೇಶಭಂಡಾರಿ, ಗೀತಾ ಗೌಡ, ಪ್ರೇಮಾ ಗುನಗಿ, ಪೂರ್ಣಿಮಾ ನಾಯ್ಕ ಹಾಜರಿದ್ದರು.