ನಾಗಮಂಗಲ: ತಾಲ್ಲೂಕಿನಲ್ಲಿ ಕಾಡುತ್ತಿರುವ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಹಲವು ಜ್ವಲಂತ ಸಮಸ್ಯೆಗಳನ್ನು 2 ತಿಂಗಳ ಅವಧಿಯೊಳಗೆ ಬಗೆಹರಿಸಲಾಗುವುದು ಎಂದು ಸಂಸದ ಎನ್.ಚಲುವರಾಯಸ್ವಾಮಿ ತಿಳಿಸಿದರು.
ತಾಲ್ಲೂಕಿನ ಕಸಬಾ ಹೋಬಳಿಯ ಮೂಡಲಮೆಳ್ಳಹಳ್ಳಿ, ದೊಡ್ಡೇಗೌಡನ ಕೊಪ್ಪಲು, ಬುಡುಬುಡುಕೆ ಕಾಲೋನಿ, ಕೆಲಗೆರೆ, ಹುಲಿಕೆರೆ, ಕನ್ನೇನಹಳ್ಳಿ, ಅರೆಹಳ್ಳಿ, ನರಗನಹಳ್ಳಿ, ಚೋಳೇನಹಳ್ಳಿ, ಮಾಯಿಗೋನಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಮಂಗಳವಾರ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದ ನಂತರ ಮಾತನಾಡಿದರು.
ಕಳೆದ 5 ವರ್ಷಗಳಿಂದ ತಾಲ್ಲೂಕಿನ ಜನತೆ ಅನೇಕ ಸಂಕಷ್ಟಗಳನ್ನು ಎದುರಿಸುತ್ತಿದೆ. ಜನ ಜಾನುವಾರು ಕುಡಿಯಲು ನೀರಿಲ್ಲದೆ ಪರಿತಪಿಸುವಂತಾಗಿದೆ. ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳು ಸೀಮೆಎಣ್ಣೆ ದೀಪದ ಮೊರೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರು ತಮ್ಮ ಪಂಪ್ಸೆಟ್ಗಳಿಗೆ ವಿದ್ಯುತ್ ಸಂಪರ್ಕ ಹೊಂದಿರುವ ಟ್ರಾನ್ಸ್ಫಾರ್ಮರ್ಗಳ ದುರಸ್ತಿಗಾಗಿ 15 ರಿಂದ 20 ಸಾವಿರ ತೆರಬೇಕಾದ ಪರಿಸ್ಥಿತಿ ಬಂದೊದಗಿರುವುದು ವಿಷಾದನೀಯ ಎಂದರು.
ಜೆಡಿಎಸ್ ಸೇರ್ಪಡೆ: ತಾಲ್ಲೂಕಿನ ಕಸಬಾ ಹೋಬಳಿಯ ಪಾಲಗ್ರಹಾರದ ಪ್ರಭಾವಿ ಕಾಂಗ್ರೆಸ್ ಮುಖಂಡರಾದ ಆನಂದ್, ಉಮೇಶ್, ಟಿ.ಎ.ಪಿ.ಸಿ.ಎಂ.ಎಸ್ ಮಾಜಿ ನಿರ್ದೇಶಕ ಈಶಣ್ಣ, ಮಣ್ಣಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮುದ್ದಂಕೇಗೌಡ ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ತೊರೆದು ಸಂಸದ ಚಲುವರಾಯಸ್ವಾಮಿ ಅವರ ಸಮ್ಮುಖದಲ್ಲಿ ಜೆಡಿಎಸ್ಗೆ ಸೇರ್ಪಡೆಗೊಂಡರು.
ಮುದ್ದಂಕೇಗೌಡ ಮಾತನಾಡಿ, ಕಾಂಗ್ರೆಸ್ನ ಕಚ್ಚಾಟದಿಂದ ಬೇಸತ್ತು ಪಕ್ಷ ತೊರೆದಿದ್ದೇನೆ. ಶಾಸಕ ಸುರೇಶ್ಗೌಡಗೆ ತಕ್ಕ ಪಾಠ ಕಲಿಸುವ ಸಲುವಾಗಿ ಕಾಂಗ್ರೆಸ್ ಪಕ್ಷದ ಅನೇಕ ಮುಖಂಡರು ಪ್ರತಿ ನಿತ್ಯ ಜೆಡಿಎಸ್ ಸೇರುತ್ತಿದ್ದಾರೆ ಎಂದರು.