ಹೈದರಾಬಾದ್: ಮೆಹಬೂಬ್ನಗರ ಜಿಲ್ಲೆಯಲ್ಲಿ ಹೊಸದಾಗಿ ಸ್ಥಾಪಿಸಲಾಗಿರುವ ಪಾಲಾಮುರ್ ವಿಶ್ವವಿದ್ಯಾಲಯದ ಮೈಕ್ರೊಬಯಾಲಾಜಿ ವಿಭಾಗದ ವಿದ್ಯಾರ್ಥಿಗಳು ಸುತ್ತಮುತ್ತಲಿನ ಹಳ್ಳಿಗಳ ನೀರಿನಲ್ಲಿ ಆಂತ್ರಾಕ್ಸ್ ರೋಗ ಹರಡುವ ರೋಗಾಣು ಇರುವುದನ್ನು ಪತ್ತೆಹಚ್ಚಿದ್ದಾರೆ.
ಮೈಕ್ರೊಬಯಾಲಾಜಿ ವಿಭಾಗದ ಮುಖ್ಯಸ್ಥ ಡಾ. ಪವನ್ ಕುಮಾರ್ ಅವರು ತಮ್ಮ ವಿಭಾಗದ ವಿದ್ಯಾರ್ಥಿಗಳಿಗೆ ಸುತ್ತಮುತ್ತಲಿನ ಹಳ್ಳಿಗಳ ನೀರಿನ ಮಾದರಿ ಸಂಗ್ರಹಿಸಲು ಸೂಚಿಸಿದ್ದರು. ವಿದ್ಯಾರ್ಥಿಗಳು 26 ತಾಂಡಾಗಳ ತೆರೆದ ಬಾವಿ, ಕೆರೆ ಮತ್ತು ಹೊಂಡಗಳಿಂದ ನೀರಿನ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯದಲ್ಲಿ ಪರೀಕ್ಷಿಸಿದಾಗ ನೀರಿನಲ್ಲಿ ಆಂತ್ರಾಕ್ಸ್ನ ರೋಗಾಣು ಇರುವುದನ್ನು ಕಂಡು ಬೆರಗಾದರು.
ನಂತರ ಡಾ. ಪವನ್ ಕುಮಾರ್ ಅವರು ಈ ನೀರಿನ ಮಾದರಿಯನ್ನು ಕೇಂದ್ರ ಪ್ರಯೋಗಾಲಯಕ್ಕೆ ಹೆಚ್ಚಿನ ಪರಿಶೀಲನೆಗಾಗಿ ಕಳುಹಿಸಿದರು. ಅಲ್ಲಿ ರೋಗಾಣು ಇರುವುದು ದೃಢಪಟ್ಟಿದೆ.
ಈ ನೀರನ್ನು ಬಳಸುತ್ತಿರುವ ತಾಂಡಾಗಳ ಜನರು ಕರಳುಬೇನೆ ಮತ್ತು ಇತರ ನಿಗೂಢ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಆದ್ದರಿಂದ ಈ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನ ನಡೆಸಲು ನಿರ್ಧರಿಸಲಾಗಿದೆ.